ಕವನ ಸಂಕಲನ
#ಕಥಾ_ಸರಪಳಿ
ನಾನು ಬರೆದ ಅಪೂರ್ಣ ಕಥೆಯನ್ನು ನನ್ನ ಮೂರುಜನ ಸ್ನೇಹಿತೆಯರು ಸೇರಿ ಪೂರ್ತಿಗೊಳಿಸಿರುವ ಕಥೆ.....
ಎರಡನೇ ಕಂತನ್ನು ಶ್ರೀಮತಿ ಸುಧಾ ತೇಲ್ಕರ್
ಮೂರನೇ ಕಂತನ್ನು ಶ್ರೀಮತಿ ಶೈಲಜಾ ಶೈಲಿ
ನಾಲ್ಕನೇ ಕಂತನ್ನು ಶ್ರೀಮತಿ ಪ್ರವೀಣಾ ದೇಶಪಾಂಡೆ ಯವರು ಬರೆದಿದ್ದಾರೆ.
ನನ್ನ ಮನದಲುದಿಸಿದ ಭಾವಕ್ಕೆ ತಮ್ಮೆಲ್ಲರ ಸುಂದರ ಭಾವವನ್ನೆರೆದು ಪೂರ್ಣಗೊಳಿಸಿದ ಕಥೆ.. ಇನ್ನು ನಿಮ್ಮೆಲ್ಲರ ಮುಂದೆ....
ಓದಿ...ಹಾರೈಸಿ.... ಪ್ರೋತ್ಸಾಹಿಸಿ.... ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ...
#ಕಥೆ....
#ನೆನಪಿನಾಳದಲ್ಲಿ.....
ಮೇಡಂ.....
ದ್ವನಿ ಬಂದ ದಿಕ್ಕಿನತ್ತ ನೋಡ್ದೆ... ಯಾರೂ ಕಾಣಿಸಲಿಲ್ಲ.. ಸುತ್ತಲೂ ನೋಡ್ದೆ... ಗಾಂಧಿಬಜಾರ್ನ ಆ ಜನ ಜಂಗುಳಿಯಲ್ಲಿ.. ಯಾರು ಯಾರನ್ನ ಕರೀತಾರೋ.. ಬೇರೆ ಯಾರನ್ನೋ ಇರಬೇಕು ಅಂದ್ಕೊಂಡು ನನ್ನ ವ್ಯಾಪಾರದಲ್ಲಿ ಮಗ್ನಳಾದೆ.
ಬೆಳ್ಳಿಗ್ಗೆ ಆದ್ರೆ ಯುಗಾದಿ ಹಬ್ಬ... ಹೂವು ಹಣ್ಣು ಮಾವಿನಸೊಪ್ಪು ಬೇವಿನಸೊಪ್ಪು ತೊಗೋಬೇಕು, ಯಜಮಾನ್ರು ಆಫೀಸ್ ನಿಂದ ಬರೋದು ಲೇಟಾಗುತ್ತೆ ಅಂದದ್ದಕ್ಕೆ ಸರಿ ನಾನೇ ಹೋಗಿ ತರೋಣ ಅಂತ ಬಂದಿದ್ದೆ. ಯಪ್ಪಾ ಏನು ಸುಟ್ಟು ಮಾರ್ತಾರೆ ಜನ... ಮಾವಿನಸೊಪ್ಪು ಬೆವಿನಸೊಪ್ಪಿಗೂ ಈ ಪಾಟಿ ಬೆಲೆಯಾ.. ರೇಟು ಕೇಳಿ ತಲೆ ಗಿರ್ ಅಂತು. ಯಾವಾಗ್ಲೂ ಅವರೇ ತರ್ತಿದ್ರು, ಅವರು ಕೇಳಿದಷ್ಟೇ ಕೊಟ್ಟು ತರ್ತಾರೆನೋ, ಮೊದ್ಲೇ ವ್ಯಾಪಾರಿಗಳ ಮೇಲೆ ಅನುಕಂಪ.. ಪಾಪ ಈ ಸಮಯದಲ್ಲಿ ಅಲ್ಲದೇ ಬೇರೆ ಟೈಮ್ ನಲ್ಲಿ ಇಷ್ಟು ವ್ಯಾಪಾರ ಆಗುತ್ತಾ... ನಾವೂ ಸಹ ಹಬ್ಬ ಹರಿದಿನಗಳಲ್ಲಷ್ಟೇ ಅಲ್ವಾ ಅವನ್ನೆಲ್ಲಾ ತರೋದು ... ಒಮ್ಮೆ ಕೊಟ್ರೆ ಏನಾಗುತ್ತೆ ಅನ್ನೋದು ಅವರ ವಾದ,
ಎಷ್ಟು ಕೊಸರಿದರೂ ಒಂದ್ರುಪಾಯಿ ಕೂಡ ಕಡಿಮೆ ಮಾಡೋಲ್ಲ ಅಂತಾನೆ.. ಓಹ್.. ಎಷ್ಟು ಸುತ್ತಿದ್ರೂ ಎಲ್ಲಾ ಕಡೆನೂ ಒಂದೇ ರೇಟ್ ಇರುತ್ತೆ.. ಇನ್ನೆಷ್ಟು ಸುತ್ತೋದು ಇಲ್ಲೇ ತೊಗೊಂಡರಾಯ್ತು ಅನ್ನುವಸ್ಟ್ರಲ್ಲೇ... ಮತ್ತೆ ಮೇಡಂ... ಸುತ್ತಲೂ ನೋಡ್ದೆ... ಎಲ್ಲಾ ಅವರವರ ಕೆಲಸಗಳಲ್ಲಿ.ಮಗ್ನ.... ಯಾರನ್ನೋ ಇರ್ಬೇಕು ಅಂದ್ಕೊಂಡು ಮುಂದೆ ಹೋಗಿ ಹೂ ವ್ಯಾಪಾರ ಮಾಡ್ತಾಇದ್ದೀನಿ... ಮತ್ತೆ ಮೇಡಂ.... ನಿಲ್ಲಿ.....
ಯಾರಪ್ಪಾ ಇದು .. ಗಡಸು ದ್ವನಿ.. ಸುತ್ತಲೂ ನೋಡಿದ್ರೂ ಯಾರು ಅಂತ ಗೊತ್ತಾಗ್ತಾಯಿಲ್ಲ... ಬೇಕಾದವ್ರು ಹತ್ರ ಬಂದು ಮಾತಾಡ್ಸ್ಲಿ ಅನ್ಕೊಂಡು 10 ಮೊಳ ಮಲ್ಲಿಗೆ ಖರೀದಿ ಮಾಡಿದೆ... ಸಂಪಿಗೆ ಬೇಡ್ವಾಮ್ಮ .. ಹೂವಿನವಳ ಮಾತಿಗೆ... ಬೇಡ ಆ ಸ್ಮೆಲ್ ಇಷ್ಟ ಆಗಲ್ಲ ಅಂದೆ... ಮತ್ಯಾಕೆ ಸಂಪಿಗೇನ ಮುಟ್ಟಿ ಮುಟ್ಟಿ ನೋಡ್ತೀರಾ... ಅವಳಂದಿದ್ದಕ್ಕೆ..ತಟ್ಟನೆ ಕೈತೆಗೆದು ದುಡ್ಡುಕೊಟ್ಟು ಹೊರಟೆ... ಕಾಲು kg ಸಂಪಿಗೆ, ಮಲ್ಲಿಗೆ ದಿಂಡು ಕೊಡು ಅಂತ ಪಕ್ಕದಲ್ಲಿ ಬಂದು ನಿಂತ ಯಾರನ್ನೋ ಸಂಪಿಗೆ ದಿಂಡು ಇದೆ ಕೊಡ್ಲಾ ಸರ್ ಅಂತ ಹೂವಿನವಳಂದಾಗ.. ಯಾಕೋ ಆ ವ್ಯಕ್ತಿಯ ಕಡೆಗೊಮ್ಮೆ ಹೂವಿನ ಕಡೆಗೊಮ್ಮೆ ದೃಷ್ಟಿ ಹಾಯಿಸಿ ಹೊರಡಲಾನುವಾದೆ.. ಮುಗುಳ್ನಕ್ಕ ಆ ವ್ಯಕ್ತಿ... ಮೇಡಂ.. ನೀವು ಶರ್ವಾಣಿ ಅಲ್ವಾ.. ಅಂದಾಗ ಕಣ್ಣರಳಿಸಿ ಪ್ರಶ್ನಾರ್ಥಕ ವಾಗಿ ಆ ವ್ಯಕ್ತಿಯ ಕಡೆ ನೋಡ್ದೆ... ನೀವ್ಯಾರು... ನನ್ನ ಪ್ರಶ್ನೆ.. ನೋಡೋಣ ಹೇಳಿ.. ಯಾರಿರಬಹುದು.. ಆ ಕಡೆಯಿಂದ ನನಗೇ ಪ್ರಶ್ನೆ.. ನೀವೇನು ಮಹಾತ್ಮ ಗಾಂಧೀನ ಗುರುತುಹಿಡಿಯೋಕೆ...ನನ್ನ ಸಿಡುಕಿನ ಪ್ರಶ್ನೆಗೆ ತಣ್ಣನೆ ನಗು ಉತ್ತರವಾಯ್ತು... ನಿಜ ನೀವು ಅದೇ ಶರ್ವಾಣಿನೇ .... ಸ್ವಲ್ಪವೂ ಚೇಂಜ್ ಆಗಿಲ್ಲ.. ಅದೇ ತುಂಟತನದ ಪ್ರಶ್ನೆ... ನಿಜ ಗೊತ್ತಾಗ್ಲಿಲ್ವಾ ನಾ ಯಾರು ಅಂತ... ನಾನು ರೀ ವರುಣ್...
ವರುಣ್.. ಯಾರು.. ? ಸಾರಿ.. ನನಗೆ ಗೊತ್ತಾಗಲಿಲ್ಲ... ಅಂತ ಹೊರಡೋಷ್ಟರಲ್ಲಿ... ನನ್ನ ಮರೆತುಬಿಟ್ರ.. ಆ ಕಡೆಯಿಂದ ಪ್ರಶ್ನೆ... ನನಗೆ ತಲೆ ಕೆಡ್ತು.. ಯಾರು ಈಯಪ್ಪಾ..ಅಂತ ದೃಷ್ಟಿಸಿ ನೋಡ್ದೆ... ಅಜಾನುಬಾಹು...ಸ್ವಲ್ಪ ದಪ್ಪವೇ ಅನ್ನಿಸುವ ದೇಹ ಅಲ್ಲಲ್ಲಿ ನರೆತ ಕೂದಲು.. ಮೀಸೆಕೂಡ ಬಿಳಿ ಬಣ್ಣವನ್ನ ಕಂಡಿತ್ತು.. ಬಿಳಿ ಮುಖದಲ್ಲಿ ತುಂಟ ಕಣ್ಣುಗಳು ನನ್ನೇ ದಿಟ್ಟಿಸಿ ನೋಡ್ತಾಯಿತ್ತು.. ಸರ್ರನೆ ದೃಷ್ಟಿ ಬೇರೆಡೆಗೆ ಸರಿಸಿ ಸಾರಿ ಗೊತ್ತಾಗಲಿಲ್ಲ ಅಂದೆ.. ಆದ್ರೆ ತುಟಿಯಂಚಿನ ಆ ನಗು ಎಲ್ಲೋ ನೋಡಿದ್ದೀನಿ ಅಂತ ಅನ್ನಿಸ್ತಿತ್ತು.. ಆದ್ರೆ ಯಾರು ಅಂತ ನೆನಪಾಗ್ತಾಯಿಲ್ಲ.. ಯಾರಿರಬಹುದು... ಛೇ ಯಾರಾದ್ರೆ ನನಗೇನು... ಬೇಗ ಮನೆ ಸೇರ್ಕೊಬೇಕು.. ಅಲ್ಲಲ್ಲಿ ಮೋಡ ಕಟ್ತಾಯಿದೆ.. ಮಳೆ ಬರುತ್ತೇನೋ.. ಇನ್ನು ರಾಶಿ ಕೆಲಸ ಇದೆ.. ಬೆಳಿಗ್ಗೆ ಹಬ್ಬಕ್ಕೆ ಪ್ರಿಪೇರ್ ಮಾಡ್ಕೋಬೇಕು ಅಂತ ಮುಂದೆ ಹೊರಟೆ..
ಶಾರೂ.... ನಿಜ ಮರೆತೆಯಾ ನನ್ನ... ವಿಷಾದದ ದ್ವನಿ.. ಹಿಂತಿರುಗಿ ನೋಡ್ದೆ... ಅದೇ ವ್ಯಕ್ತಿ.. ತುಂಟತನದ ಆ ಕಣ್ಣುಗಳಲ್ಲಿ ನೀರು... ಛೇ ಯಾರಪ್ಪಾ ಇವ್ರು... ಶಾರೂ .. ಅಂದ್ರೆ ಯಾರೋ ತುಂಬಾ ಗೊತ್ತಿರುವವರೆ.. ಆದ್ರೆ ನನಗೆ ನೆನಪಾಗ್ತಾ ಇಲ್ವೇ.. ಛೇ ಅನ್ನಿಸ್ತು... ಮತ್ತೆ... ಶಾರೂ... ಶಾರೂ... ಈ ದ್ವನಿ ಎಲ್ಲೋ ಕೇಳಿದ್ದೀನಿ.. ಇವ್ರು ... ವರುಣ್ ಅಂದ್ರು ಅಲ್ವಾ... ಓಹ್.. ವರುಣ್..!! ಆ ವರುಣ್.. ಇವರೇನಾ.. ಒಮ್ಮೆಗೇ ಮೈ ಬಿಸಿಯಾದಂಗಾಯ್ತು... ಹೃದಯ ಬಡಿತ ಜೋರಾಯ್ತು... ಮುಖ ದಿಟ್ಟಿಸಿ ನೋಡ್ದೆ... ಆ ತುಂಟ ಕಣ್ಣು... ತುಟಿಯಂಚಿನ ನಗೆ.. ಓಹ್... ಹೌದು.. ಇದು ಅದೇ ವರುಣ್.. ಮಧ್ಯಮ ಮೈಕಟ್ಟಿನ, ತುಂಟ ನಗೆಯ, ಕಣ್ಣಲ್ಲೇ ಮೋಡಿ ಮೋಡಿ ಮಾಡುವ ಅರಡಿ ಎತ್ತರದ, ಅಲೆ ಅಲೆ ಕೂದಲಿನ ಆ ಸ್ಮಾರ್ಟ್ ವರುಣ್ ಕಣ್ಣಮುಂದೆ ಬಂದ.. ತಲೆ ತಿರುಗಿದಂತಾಯ್ತು.. ಬೀಳ್ತೀನೇನೋ ಅನ್ನಿಸುವಷ್ಟರಲ್ಲೇ ಅಲ್ಲಿರುವ ತಳ್ಳುಗಾಡಿ ಹಿಡಿದು ಸಾವರಿಸಿ ನಿಂತೆ.. ಹೇ. ಹುಷಾರು... ಏನಾಯ್ತು.. ಧಾವಿಸಿ ಬಂದ ಆ ವ್ಯಕ್ತಿ... ಕಣ್ಣು ಕತ್ತಲಿಟ್ಟು ಬಂತು. ಗಲಿಬಿಲಿಗೊಂಡ ಆ ವ್ಯಕ್ತಿ ಕೈಹಿಡಿದು ಆಧಾರವಾಗಿ ನಿಂತ... ಮಿಂಚು ಹರಿದಂತಾಯ್ತು ಮೈಯಲ್ಲಿ...ತಕ್ಷಣವೇ ಎರಡಡಿ ದೂರ ಹಾರಿದ್ದೆ... ಪಾಪ ಏನನ್ನಿಸಿತೋ ಅವನೂ ದೂರ ಹೋಗಿ ನಿಂತ...
ನಿಜ... ಅದೇ ಸ್ಪರ್ಶ.. ಅವನೇ.. ಅವನೇ.. ಅಂದೂ ಹಾಗೇ ಆಗಿದ್ದಲ್ವಾ.. ವಿಜಯಕ್ಕನ್ನ ಸಿಂಗರಿಸುತ್ತಿದ್ದ..ನನಗೆ... ಆಯ್ತಾ ಬೇಗ ಕರ್ಕೊಂಡ್ಬನ್ನಿ ಮಹೂರ್ತಕ್ಕೆ ಟೈಮ್ ಆಯ್ತು ತೊಗೊಳ್ಳಿ ದೃಷ್ಟಿ ಬೊಟ್ಟು ಇಟ್ಬಿಡಿ ಅಂತ ಕಪ್ಪಿನ ಡಬ್ಬಿ ಕೈಲಿಟ್ಟಾಗ ಕೈ ಸೋಕಿ ಶಾಕ್ ಹೊಡೆದಂತೆ ಅನ್ನಿಸ್ತು... ಇಬ್ಬರಿಗೂ... ಅವನೂ ಒಂದಡಿ ಹಿಂದೆ ಸರಿದಿದ್ದ.. ನಾನು ತಲೆತಗ್ಗಿಸಿ ವಿಜಯಕ್ಕನ ಹಿಂದೆ ಅಡಗಿದ್ದೆ...ಏನೋ ರೋಮಾಂಚನ.. ಅತೀವ ಆನಂದ , ಭಯ, ನಾಚಿಕೆ.. ಏನೇನೋ ಆಗಿತ್ತು... ಈ ಬೆಂಗಳೂರಿನ ಜನಸಂಧನಿಯಲ್ಲಿ ಪ್ರತಿನಿತ್ಯ ಒಡಾಡುವಾಗ ಯಾರ್ಯಾರದ್ದೋ ಕೈ ಮೈ ಎಲ್ಲ ತಗಲುತ್ತೆ.. ಅದ್ರಲ್ಲೂ ಬಸ್ಸು. ಅಂದ್ರೆ ಬೇಕಂತಲೇ ಕೈ ತಾಕಿಸಿ ಓಡಾಡ್ತಾರೆ ಪುಂಡ ಜನ.. ಆದ್ರೆ ಯಾವತ್ತೂ ಹೀಗಾಗಡಿದ್ದಿದ್ದು ವರುಣ್ ಕೈ ಟಚ್ ಆದಾಗ ಹೀಗಾಗಿದ್ದೇಕೆ ಅಂತ ತಲೆಕೆಡಿಸಿ ಕೊಂಡಿದ್ದೆ... ಇಂದೂ ಅದೇ ರೋಮಾಂಚನ... ಅಂದ್ರೆ ಇದು ವರುಣ್ಣೆ ಅನುಮಾನವೇ ಇಲ್ಲ... ತಲೆ ಎತ್ತಿ ನೋಡಿದಾಗ ಗಾಬರಿಯಿಂದ ನಿಂತಿದ್ದ ಪಾಪ...
ಶರ್ವಾಣಿ .. ನಾನು ವರುಣ್.. ನೆನಪಾಯ್ತಾ... ಹೇಗಿದ್ದೀರಾ... ಸುಸ್ತಾಗ್ತಾಯಿದೆಯಾ.. ನೀರು ಕುಡೀತೀರಾ
ಏನಾಯ್ತು... ಬನ್ನಿ ಅಲ್ಲಿ ಕೂತು ಸ್ವಲ್ಪ ಸುಧಾರಿಸಿಕೊಳ್ಳಿ.. ಆರೋಗ್ಯ ಸರಿ ಇದೆ ತಾನೇ... ಒಂದೇ ಸಮನೆ ಪ್ರಶ್ನೆಗಳ ಸುರಿಮಳೆ. ಯಾಕೋ.. ನಿಲ್ಲಲೂ ಆಗದೆ ಚಟಪಡಿಸುವಂತಾಯ್ತು... ನಾ ಬರ್ತೀನಿ ಅಂತ ಹೊರಟೆ... ಸ್ವಲ್ಪ ಸುಧಾರಿಸಿ ಹೊರಡಿ.. ಬನ್ನಿ ಸ್ವಲ್ಪ ನೀರು ಕುಡಿದು ಹೋಗಿ ಎಂದು ಬಿಸ್ಲೇರಿ ಬಾಟಲ್ ಕೊಂಡುತಂದ... ಗಂಟಲೋಣಗಿದಂತಾಗಿ ಗಟಗಟ ಕುಡಿದೆ ನೀರನ್ನ.. ಒಂದೈದ್ನಿಮಿಷ ನನಗಾಗಿ ...ಪ್ಲೀಸ್. ಮಾತಾಡಬೇಕು... ಬನ್ನಿ ಕಾಫಿ ಕುಡೀತಾ ಮಾತಾಡೋಣ ಅಂತ ಹೊರಟೆ ಬಿಟ್ಟ... ಹಿಂಬಾಲಿಸುವ ಸರದಿ ನನ್ನದಾಯ್ತು...
25 ವರ್ಷಗಳ ಹಿಂದೆ ನೋಡಿದ್ದು, ಕೈಯ್ಯಲ್ಲಿ ಲಗ್ನಪತ್ರಿಕೆ ಹಿಡಿದು, ಮನೆಯವರಿಗೆಲ್ಲಾ ಬಟ್ಟೆಗಳನ್ನ ತೊಗೊಂಡು ಬಂದಿದ್ದ ವರುಣ್. ಅಪ್ಪ ಅಮ್ಮನಿಗೆ ನಮಸ್ಕಾರ ಮಾಡಿ ಅಮ್ಮನಿಗೆ, ಸೀರೆ ಅಪ್ಪನಿಗೆ ಪಂಚೆ ಶರ್ಟ್ ಕೊಟ್ಟು ದೀಪ ನನ್ನ ಬಾಳ ಸಂಗಾತಿಯಾಗಿ ಬರ್ತಾಇದ್ದಾಳೆ, ನಿಮ್ಮ ಆಶೀರ್ವಾದ ಬೇಕು, ಹರಸಿ ಎಂದು ಅಣ್ಣ ಅತ್ತಿಗೆಗೆ ಹೊಸಬಟ್ಟೆ ಕೊಟ್ಟು ಶರ್ವಾಣಿ ಎಲ್ಲಿ ಅವರಿಗೂ ಈ ಸೀರೆ ಕೊಡಬೇಕು ಕಣ್ಣಂಚಿನಲ್ಲೇ ನನ್ನ.ಹುಡುಕುತ್ತಿರೋದನ್ನ.. ರೂಮಿನ ಬಾಗಿಲಿನ ಸಂದಿಯಲ್ಲೇ ನೋಡುತ್ತಿದ್ದ ನನಗೆ ಏನೋ ಕಳೆದ ಅನುಭವ... ಹೃದಯವನ್ನೇ ಕಿತ್ತೆಸೆದಂತೆ ಅನ್ನಿಸ್ತಿತ್ತು. ಕೊನೆಗೂ ವರುಣ್ ಬೇರೆಯವರ ಸ್ವತ್ತಾಗಿಬಿಟ್ಟ... ಅವನ ಮಾತನ್ನ ನಾನು ಕೇಳಬೇಕಿತ್ತು ಅಂತ ಒಮ್ಮೆ ಅನ್ನಿಸದಿರಲಿಲ್ಲ... ಛೇ ಹೀಗೇಕೆ ಯೋಚ್ನೆ ಮಾಡ್ತಾಇದ್ದೀನಿ ನಾನು.. ನನಗೇನಾಗಿದೆ... ನಾನು ಆಶ್ರಮದ ಭಕ್ತೆ, ವಿರಕ್ತಿಯ ಹಾದಿಯಲ್ಲಿ ನಡೆಯಬೇಕೆಂಬುವವಳಿಗೆ ಈ ಸೆಳೆತ ಒಪ್ಪುವುದಿಲ್ಲ, ಅವನು ಯಾರನ್ನ ಮದುವೆಯಾದ್ರೆ ನನಗೇನು, ನಾನಂತೂ ಅವನನ್ನ ಇಷ್ಟಪಟ್ಟಿಲ್ಲ... ಪ್ರೀತ್ಸಿಲ್ಲ.. ಅಂತ ಮನಸ್ಸಿಗೆ ಕೂಗಿ ಕೂಗಿ ಹೇಳ್ದೆ, ರೂಮಲ್ಲಿ ಕೂತಿರಲಾಗದೆ ಹಿತ್ತಲ ಬಾಗಿಲಕಡೆಯಿಂದ ಬಟ್ಟೆ ಒಗೆಯುವ ಬಂಡೆಯ ಮೇಲೆ ಕೂತೆ... ಸುತ್ತ ಹೂಗಳು ನಳನಳಿಸಿ ನಗುತ್ತಿದ್ದವು, ಸದಾ ಮನಸ್ಸಿಗೆ ಆಹ್ಲಾದ ಕೊಡುತ್ತಿದ್ದ ಹೂಗಳು ಇಂದು ಮನಸ್ಸಿರಿದು ನನ್ನ ನೋಡಿ ನಕ್ಕಹಾಗಾಯ್ತು... ಮೆಲ್ಲಗೆ ಹೇಳಿದ್ದೆ ಅವಕ್ಕೆ... ನನ್ನ ನಿನ್ನ ಪರಿಸ್ಥಿತಿ ಒಂದೇತರ.. ನಮಗೆ ಆಯ್ಕೆಗಳಿಲ್ಲ, ಬದುಕು ಹೇಗೆ ಸಾಗುತ್ತೋ ಹಾಗೆ ಸಾಗಬೇಕು... ಯಾವ ಹೂವು ಯಾರ ಮುಡಿಗೋ... ಯಾರ ಒಲವು ಯಾರ ಕಡೆಗೂ ಇಂಥ ಪ್ರೇಮದಾಟದೇ ಯಾರ ಹೃದಯ ಯಾರಿಗೋ....
ನಿಜ ಶಾರೂ... ಯಾವ ಹೂವು ಯಾರ ಮುಡಿಗೋ... ತುಂಬಾ ಆಸೆ ಪಟ್ಟಿದ್ದೆ... ಈ ಹೂವು ನನಗೇ ಸಲ್ಲಬೇಕು ಅಂತ ಆದ್ರೆ ನೀನೇ ಮನಸ್ಸು ಮಾಡ್ಲಿಲ್ಲ.. ನಾ ಬೇಡಿಕೊಂಡೇ ನಿನ್ನ.. ಆದ್ರೆ .. ನೀನು..? ನನಗಾಗಿ ಅಪ್ಪ ಅಮ್ಮನ ಮುಂದೆ ನೀ ಮಾತಾಡಿದ್ದಿದ್ರೆ.. ಈ ಲಗ್ನ ಪತ್ರಿಕೆಯಲ್ಲಿ ನಿನ್ನ ಹೆಸರಿರ್ತಿತ್ತು.... ಹೂಮ್ ನನ್ನ ಹಣೆಲಿ ಬರ್ದಿಲ್ಲ ಅನ್ನಿಸುತ್ತೆ.. ಅಮ್ಮನ ಬಲವಂತಕ್ಕೆ ಮದುವೆ ಆಗ್ತಾಇದ್ದೀನಿ... ಸಾಧ್ಯವಾದ್ರೆ ಮದುವೆಗೆ ಬಾ... ತುಂಬಾ ಆಸೆಯಿಂದ ಈ ಸೀರೆ ನಿನಗೆ ಅಂತ ತಂದಿದ್ದೀನಿ.. ಇದನ್ನ ಉಟ್ಟು ಮದುವೆಗೆ ಬಾ ಶಾರೂ.. ನಿನ್ನನ್ನ ಕಣ್ಣಲ್ಲಿ ತುಂಬಿಕೊಂಡು ದೀಪನ್ಗೆ ತಾಳಿ ಕಟ್ಟೀನಿ.. ಅಂತ ಹೇಳಿ ನನ್ನ್ಯಾವ ಮಾತಿಗೂ ಕಾಯ್ದೆ ಹೊರಟೇಬಿಟ್ಟಿದ್ದ...
ಮದುವೇದಿನ ನನ್ನನ್ನು ಬಿಟ್ಟು ಎಲ್ಲರೂ ಹೊರಟರು , ನಾನು ತಲೆನೋವು ಬರಲ್ಲ ಅನ್ನೋ ನೆಪ ಹೇಳಿ ಮನೇಲಿ ಉಳಿದಿದ್ದೆ... ಮನೆಯಲ್ಲೂ ಇರೊಕ್ಕಾಗದೆ ಆಶ್ರಮದ ಕಡೆ ಹೊರಟೆ... ಗುರುದೇವನ ಮುಂದೆ ನಿಂತು... ಸಂಸಾರದ ಈ ಜಂಜಾಟಗಳಿಂದ ದೂರ ಇಡು.. ಜ್ಞಾನ ಭಕ್ತಿ ವಿವೇಕ ವೈರಾಗ್ಯ ಕೊಡು ಅಂತ ಪ್ರಾರ್ಥಿಸ್ತಾ ಧ್ಯಾನಕ್ಕೆ ಕುಳಿತರೆ.. ಏಕಾಗ್ರತೆಯೇ ಬರ್ತಾಇಲ್ಲ... ಏನೋ ಕಳೆದಂತೆ.. ಮನದಲ್ಲಿ ತಳಮಳ...ಹೊಟ್ಟೆ ಹಿಂಡಿದಂತ ಅನುಭವ.. ಅವನ ಬಗ್ಗೆ ಪ್ರೀತಿ ಇಲ್ಲಾಂದ್ರೂ ಯಾಕೆ ಹೀಗೆ.? ಮನಸ್ಸು ನನ್ನ ಮಾತು ಕೇಳಿಲ್ಲವೇ.. ಒಳಮನಸ್ಸು ಅವನನ್ನು ಇಷ್ಟಪಟ್ಟಿದೆಯಾ.. ನೂರಾರು ಪ್ರಶ್ನೆಗಳು.. ಒಂದಕ್ಕೂ ಉತ್ತರ ಸಿಗದೆ, ಧ್ಯಾನವನ್ನೂ ಮಾಡಲಾಗದೆ ಎದ್ದು ಮನಗೆ ಬಂದು ಬಿಕ್ಕಿಬಿಕ್ಕಿ ಅತ್ತಿದ್ದೆ.... ಯೋಚನಾಲಹರಿಯಲಿ ಹೆಜ್ಜೆ ಕಲ್ಲಿನ ಸಂದಿಯಲ್ಲಿ ಸಿಕ್ಕು ನೋವಿನಿಂದ ಅಮ್ಮಾ ಅನ್ನೋ ಉದ್ಗಾರ ಕೇಳಿ ಹಿಂತಿರುಗಿ ವರುಣ್ ಬೀಳದಂತೆ ಕೈಹಿಡಿದಾಗಲಷ್ಟೇ.. ವಾಸ್ತವದ ಅರಿವಾದದ್ದು... ಯಾಕೆ.. ಎಲ್ಲಿ ನೋಡಿ ಬರ್ತಾಇದ್ದೀರಾ... ಬಿದ್ದೀರಿ ಜೋಕೆ.. ತಲೆ ಸುತ್ತುತ್ತಿದೆಯಾ.. ಹುಷಾರು.. ಎಂದವನಿಗೆ ಮುಗುಳ್ನಕ್ಕು ನಡೆದಿದ್ದೆ...
ಹೋಟೆಲ್ನ ಮೂಲೆಯ ಟೇಬಲ್ ಕಡೆ ನಡೆದ ವರುಣ್, ಮಾತಿಲ್ಲದೇ ಹಿಂಬಾಲಿಸಿದ್ದೆ ನಾನು... ಮನದಲ್ಲಿ ಸಾವಿರ ಪ್ರಶ್ನೆಗಳು, ಗೊಂದಲಗಳು, ಮರೆತೇ ಹೋಗಿದ್ದ ವರುಣ್.. ಧುತ್ತನೆ ಎದುರಾದಾಗ ಹೇಗೆ ಪ್ರತಿಕ್ರಿಯಿಸಬೇಕೆಂಬ ತಳಮಳ , ಏನು ಮಾತನಾಡೋದು, ಹೇಗಿದ್ದಾನೋ... ಅವನ ಸಂಸಾರ, ಅಮ್ಮ.. ಅಕ್ಕಂದ್ರು..ತಮ್ಮ ಎಲ್ಲಾ ಹೇಗಿದ್ದಾರೋ.. ಹೆಂಡತಿ ಹೆಸರು... ಏನೂ...ಹಾಂ. ದೀಪ ಅಂದಿದ್ದ ಅಲ್ವಾ ಅವತ್ತು... ಹುಂ.. ಆಕೆ ಹೇಗಿದ್ದಾರೋ.. ಮಕ್ಕಳು ಎಷ್ಟಿರಬಹುದು ... ಏನೇನೋ ಪ್ರಶ್ನೆಗಳು ಮನದಲ್ಲಿ ಹಾದುಹೋದವು....
ಇಲ್ಲಿ... ಈ ಕಡೆ ಬನ್ನಿ ಕೂತ್ಕೊಳ್ಳಿ ಶರ್ವಾಣಿ... ನಿಂತೇ ಇರ್ತೀರಾ..? ಬನ್ನಿ ಎಂದಾಗಲಷ್ಟೇ ಯೋಚನಾಲಹರಿಯಿಂದ ಹೊರಬಂದದ್ದು... ಹುಂ ಮತ್ತೇನು..? ಆ ಕಡೆಯಿಂದ ಪ್ರಶ್ನೆ... ಏನಿಲ್ಲ ಎಂಬಂತೆ ತಲೆಯಾಡಿಸಿದೆ.. ಸರ್ ಎನ್ ಕೊಡ್ಲಿ ಎಂದ ವೈಟರ್ ಗೆ ಒಂದು ಸ್ಟ್ರಾಂಗ್ ಕಾಫಿ.. ಒಂದು ಹಾರ್ಲಿಕ್ಸ್ ಕೊಡಿ ಎಂದಾಗ ತಲೆ ಎತ್ತಿ ಅವನನ್ನ ನೋಡ್ದೆ.. ಏನಾದ್ರೂ ತಿಂತೀರಾ.. ಅಂದಾಗ ಬೇಡವೆಂದು ತಲೆ ಅಲ್ಲಾಡಿಸಿದ್ದೆ.. ಏನಾದ್ರೂ ಸ್ವೀಟ್ ತೊಗೊಳ್ಳಿ...25 ವರ್ಷಗಳ ನಂತರದ ಭೇಟಿ.. ಬಾಯಿ ಸಿಹಿ ಮಾಡ್ಕೊಳ್ಳೋಣ... ಬೇಡವೆಂದು ತಲೆಯಾಡಿಸಿ .. ಟೈಮ್ ಆಯ್ತು.. ಮನೆಗೆ ಹೋಗ್ಬೇಕು ಎಂದು ಅವಸರಿಸಿದ್ದೆ .
ವೈಟರ್ ತಂದಿಟ್ಟ ಹಾರ್ಲಿಕ್ಸ್ ನನ್ನೆಡೆಗೆ ತಳ್ಳುತ್ತಾ... ನೀವು ಕಾಫಿ ಕುಡಿಯೋದಿಲ್ಲವಲ್ಲ ... ಈಗ್ಲೂ ಕುಡಿಯೊಲ್ವಾ.. ತೊಗೊಳ್ಳಿ ಅಂದಾಗ ತಲೆಯಾಡಿಸಿದ್ದೆ ....
ಯಾಕೆ.. ಶಾರೂ... ಅಂದೂ ಮೌನ ತಾಳಿದ್ದೆ.. ಈಗಲೂ ಅದೇ ಮೌನವಾ... 25 ವರ್ಷಗಳ ನಂತರ ಸಿಕ್ಕಿದ್ದೀರಾ ... ಈಗ್ಲೂ ಏನೂ ಮಾತಾಡಲ್ವಾ ... ಪ್ಲೀಸ್ ಶಾರೂ... ಅವನ ಗೋಗರೆತ ಯಾಕೋ ಚುರ್ ಅನ್ನಿಸ್ತು... ಹಾಗೇನಿಲ್ಲ.. ಸ್ವಲ್ಪ ತಲೆನೋವಷ್ಟೇ.. ಎಂದಿದ್ದೆ.. ಹ ಕುಡಿತಾಯಿರಿ .. ಒಂದ್ನಿಮಿಷ ಬಂದೆ ಎಂದು ಹೊರಗೆ ಹೋದವನ ಹಿಂದೆಯೇ ಓಡಿತ್ತು ಮನಸು... ಹೌದು.. ಅಂದೂ ನಾನು ಮೌನ ತಾಳಿದ್ದೆ.. ..
ಅಂದು ಆಫೀಸ್ನಿಂದ ಹೊರಟಾಗ ಹೊರಗಡೆಯೇ ನಿಂತಿದ್ದ ವರುಣ್ ನ ನೋಡಿ ಅವಾಕ್ಕಾದೆ.. ನಿಮಗಾಗೇ ಕಾಯ್ತಾಇದ್ದೆ ಶರ್ವಾಣಿ.. ಬನ್ನಿ ಬಸ್ನಲ್ಲಿ ಹೋಗೋದು ಬೇಡ.. ಬನ್ನಿ ನನ್ನ ಬೈಕಲ್ಲಿ ಹೋಗೋಣ ಅಂದಾಗ ಏನೋ ಅಳುಕು.. ಬೇಡ.. ನಾನು ಬಸ್ನಲ್ಲೇ ಬರ್ತೀನಿ ನೀವು ಹೊರಡಿ... ಮನೇಲಿ ಮಾತಾಡೋಕ್ಕಾಗಲ್ಲ ಶರ್ವಾಣಿ.. ಬನ್ನಿ ಹೋಟೆಲ್ನಲ್ಲಿ ಕಾಫಿ ಕುಡೀತಾ ಮಾತಾಡೋಣ.. ನೋ... ಇಲ್ಲ ವರುಣ್.. ನಿಮಗೂ ಗೊತ್ತು ನಾನ್ಯಾರ ಜೊತೆಲೂ ಹೋಟೆಲ್ಗೆ ಬರೋಲ್ಲ ಅಂತ.. ಆದ್ರೂ ಕರೀತೀರಾ..
ಓಹ್... ಸರಿ ಬನ್ನಿ ಆಶ್ರಮಕ್ಕೆ ಹೋಗೋಣ ಅಲ್ಲಿ ಮಾತಾಡೋಣ ಅಂದಾಗ ಮನಸ್ಸಿಲ್ಲದ ಮನಸ್ಸಿನಿಂದಲೇ ಅವನ ಬೈಕೇರಿ ಕುಳಿತಿದ್ದೆ... ಏನೋ ಒಂತರಾ .. ನೋವು.. ಸಂತೋಷ ಮಿಳಿತವಾಗಿತ್ತು ಮನದಲಿ... ಎಲ್ಲಾ ಸರಿಇದ್ದಿದ್ರೆ ಈ ಬೈಕ್ನ ಒಡತಿ ನಾನಾಗಿರ್ತಿದ್ದೆ .. ಆದ್ರೆ... ಒಂದು ವಿಷಾದದ ನಗೆ ತುಟಿಯಂಚಲ್ಲಿ..
ಗುರುದೇವನ ದರ್ಶನ..ಚಿಕ್ಕದಾದ ಧ್ಯಾನ ಮುಗಿಸಿ ಹೊರಬಂದು ರಾಮಕೃಷ್ಣ ಸಭಾಂಗಣದ ಮೆಟ್ಟಿಲ ಮೇಲೆ ಕುಳಿತೆವು... ಎಲ್ಲವ ಯೋಗಕ್ಷೇಮ ವಿಚಾರಿಸಿ ಚಿಕ್ಕದಾಗಿ ಮಾತಿಗೆ ಪೀಠಿಕೆ ಹಾಕ್ದ ವರುಣ್...
ಶಾರೂ ಅಮ್ಮನಿಗೆ ಆರೋಗ್ಯ ಕೆಡ್ತಾಯಿದೆ.. ಮದುವೆ ಮಾಡ್ಕೊ ಅಂತ ಅಮ್ಮನ ಒತ್ತಾಯ .. ನೀವೆನ್ಹೇಳ್ತೀರಿ.. ನನ್ನ ಮುಖ ನೋಡ್ದ... ಹೌದಾ ಏನಾಯ್ತು ಅಮ್ಮಂಗೆ.. ಅವರ ಆಸೆನೂ ಸರಿಯಿದೆ ಅಲ್ವಾ ..ಬೇಗ ಮದುವೆ ಮಾಡ್ಕೊಳ್ಳಿ. ಅಂದೆ
ಹುಂ... ಅದಕ್ಕೇ ಬಂದದ್ದು.. ನಿಮ್ಮ ಒಪ್ಪಿಗೆ ಬೇಕಲ್ವಾ... ಯಾವಾಗ ಮದುವೆ ಆಗೋಣ...
ಹೇ.. ನಿಮ್ಮ ಮದುವೆಗೆ ನಾನ್ಯಾಕೆ ಒಪ್ಪಿಗೆ ಕೊಡಬೇಕು.. ನನ್ನ ಪ್ರಶ್ನೆಗೆ ಗೋಗರೆದ... ಬೇಡ ಶಾರೂ.. ಇಲ್ಲ ಅನ್ನಬೇಡಿ... ಮನಸ್ಸಿನ ತುಂಬಾ ನಿಮ್ಮನ್ನೇ ತುಂಬಿಕೊಂಡಿದ್ದೀನಿ, ನಿಮ್ಮನ್ನಲ್ಲದೆ ಬೇರೆ ಯಾರನ್ನೂ ಸಂಗಾತಿ ಅಂತ ಮನ ಒಪ್ಪೋಲ್ಲ, ನೀವೊಮ್ಮೆ ನಿಮ್ಮ ಅಪ್ಪ ಅಮ್ಮನ ಬಳಿ ಮಾತಾಡಿ ಪ್ಲೀಸ್, ಅಣ್ಣನಿಗೆ ಹೇಳಿ... ನೀವು ಮಾತಾಡಿದ್ರೆ ಅವ್ರು ಇಲ್ಲ ಅನ್ನಲ್ಲ... 5 ವರ್ಷಗಳಿಂದ ನಮ್ಮಿಬ್ಬರ ಮದುವೆ ಅಂತ ಅಣ್ಣ ಹೇಳ್ತಾ ಬಂದದ್ದು ನೆನಪಿದೆ ಅಲ್ವಾ, ನನ್ನೊಡನೆ ಎಷ್ಟು ಬಾರಿ ಇದೇ ಮಾತಾಡಿ ನನ್ನ ಮಸಸ್ನಲ್ಲಿ ಆಸೆ ಹುಟ್ಟಿಸಿದ್ದಾರೆ... ಛೇ.. ಆ ನಮ್ ಚಿಕ್ಕಪ್ಪನಿಂದ ನನ್ನ ಆಸೆ ನಿರಾಸೆ ಆಗ್ತಾ ಇದೆ. ಯಾಕೆ ನಿಮ್ಮಣ್ಣ ನಿಗೂ ಯೋಚ್ನೆ ಮಾಡೋ ಶಕ್ತಿ ಇಲ್ವಾ... ಸುಮ್ನೆ ನನ್ನ ಲೈಫ್ ಹಾಳ್ಮಾಡ್ತಾಇದ್ದಾರೆ...ಛೇ...
ಕೂಲ್..ಕೂಲ್.. ಯಾಕಿಷ್ಟು ಎಗ್ಸೈಟ್ ಆಗ್ತೀರಿ ವರುಣ್, ಯಾರ ಹಣೆಲಿ ಏನು ಬರೆದಿರುತ್ತೋ ಅದೇ ಆಗೋದು.. ನಾನು ಯಾರನ್ನೂ ಏನನ್ನೂ ಕೇಳಲಾರೆ.. ಅವರಾಗಿ ಒಪ್ಪಿದರೆ ನನ್ನ ಅಭ್ಯಂತರವಿಲ್ಲ..... ನಾನಾಗಿ ಮಾತ್ರ ಕೇಳಲ್ಲ ....ಸಾರಿ.. ಯೋಗಾಯೋಗ ಇದ್ರೆ ಆಗುತ್ತೆ.. ಇಲ್ಲಾಂದ್ರೆ ಇಲ್ಲ.. ಸರಿ.. ನಾ ಹೊರಡ್ತೀನಿ..ಟೈಮ್ ಆಯ್ತು ಅಂತ ತಣ್ಣಗೆ ಎದ್ದು ಹೊರಟಿದ್ದೆನಾದ್ರೂ.. ಮನದಲ್ಲಿ ಅರಿಯದ ಕೋಲಾಹಲ.... ಏನೋ ಹಿಂಡಿದಹಾಗೆ... ಹೃದಯವೇ ಕಿತ್ತುಬಂದಹಾಗೆ... ಏನೋ ಕಳೆದ ಅನುಭವ... ಹೇಗೆ ಮನಗೆ ಬಂದೇನೋ.ಗೊತ್ತಿಲ್ಲ.. ಬಂದವಳೇ ಹಾಸಿಗೆ ಮೇಲೆ ದೊಪ್ಪೆಂದು ಬಿದ್ದಿದ್ದೆ... ಸೌಂಡ್ ಕೇಳಿ ಅಮ್ಮ ಓಡಿ ಬಂದು ಏನಾಯ್ತು ಚಿನ್ನಿ . ಯಾಕೆ ಹಾಗೆ ಬಿದ್ದದ್ದು.. ಹುಷಾರಿಲ್ವಾ.. ಅಂತ ಒಂದೇ ಸಮ ಬಡಬಡಿಸ್ತಾಇದ್ರೂ ಅವರ ಕಡೆಗೆ ಅರಿವೇ ಇಲ್ಲದೆ ಬಿಕ್ಕಿ ಬಿಕ್ಕಿ ಅತ್ತಿದ್ದೆ... ಅಮ್ಮ ಗಾಬರಿಯಾಗಿ ಅಪ್ಪನ್ನ, ಅತ್ತಿಗೇನ ಕೂಗಿ ಯಾಕೋ ಹೇಗೆಗೋ ಆಡ್ತಾಇದ್ದಾಳೆ ಶಾರೂ ನೋಡಿ ಅಂತ ಕಿರುಚಿದಾಗಲೇ.. ವಾಸ್ತವದ ಅರಿವಾದದ್ದು.. ತಕ್ಷಣ ಸಾವರಿಸಿ ಇಲ್ಲದ ತಲೆ ಸಿಡಿತದ ನೆಪ ಹೇಳಿ ಜಾರಿಕೊಂಡಿದ್ದೆ.. ತಕ್ಷಣ ಡಾಕ್ಟರ್ ಅಂಕಲ್ಗೆ ಫೋನ್ ಮಾಡಿ ಕರೆಸಿದ್ದೂ ಆಯ್ತು.. ಕೆಂಪಾದ ಕಣ್ಣನ್ನು ನೋಡಿ ತುಂಬಾ ತಲೆನೋವು, ಸ್ಟ್ರೆಸ್, ನಿದ್ದೆಗೆಟ್ಟು ಧ್ಯಾನ ಜಪ ಅಂತ ಮಾಡ್ತಾಳೆ.. ಯಾವಾಗ್ಲೂ ಓದೋದು..ಕಂಪ್ಯೂಟರ್ ನೋಡೋದು ಮಾಡ್ತಾಳಲ್ಲ ಹಾಗಾಗಿ ಇಷ್ಟು ತಲೆನೋವು ಅಂತ್ಹೇಳಿ ಮಾತ್ರೆ ಕೊಟ್ಟು ಆರಾಮಾಗಿ ನಿದ್ದೆ ಮಾಡು ಎಲ್ಲಾ ಸರಿ ಹೋಗುತ್ತೆ ಅಂತ ಹೇಳಿ ಹೊರಟರು....
ಅದಾದ ಎರಡು ತಿಂಗಳಿಗೆ ವರುಣ್ ಲಗ್ನಪತ್ರಿಕೆ ಹಿಡಿದು ಬಂದಿದ್ದ... ಇದಾಗಿ ಎಷ್ಟು ವರ್ಷಗಳು ಕಳೆದವೋ... ಈಗ ಮತ್ತೆ ದೊತ್ ಎಂದು ಎದುರು ಪ್ರತ್ಯಕ್ಷ.. ಕಣ್ಣಲ್ಲಿ ನೀರು ಜಿನುಗುತ್ತಿತ್ತು...
ಶಾರೂ...ತೊಗೊಳ್ಳಿ ಮಾತ್ರೆ.. ಅಂತ ಕೈಲಿ ನೀರು ಮಾತ್ರೇ ಹಿಡಿದು ಕೂಗಿದಾಗಲೇ ನೆನಪಿನಿಂದ ಹೊರಬಂದದ್ದು... ತೊಗೊಳ್ಳಿ ತಲೆನೋವು ಆಂದ್ರಲ್ಲ , ಪಕ್ಕದಲ್ಲೇ ಮೆಡಿಕಲ್.ಸ್ಟೋರ್.
ಮಾತ್ರೆ ತಂದೆ ತೊಗೊಳ್ಳಿ 5 ನಿಮಿಷಕ್ಕೆ ಗಾಯಬ್ ಅಂತ ನಸು ನಕ್ಕ... ಅದೇ ಸುಂದರ ನಗೆ, ತುಟಿಯಲ್ಲಿನ ಆ ನಗು... ವಾಹ್...!!! ಆ ನಗುವೇ ಅಲ್ಲವೇ ನನ್ನ ಸೆಳೆದದ್ದು.. !!!
ಹುಂ...ಮತ್ತೆ ಏನ್ಮಾಡ್ತಾಇದ್ದೀರಿ... ಜಾಬ್... ಫ್ಯಾಮಿಲಿ, ಮಕ್ಕಳು.. ಎಲ್ಲಿರೋದು. ಒಂದೇ ಸಮ ಪ್ರಶ್ನೆಗಳ ಸುರಿಮಳೆ... ಒಂತರಾ ತಬ್ಬಿಬ್ಬು .. ಏನು ಮಾತಾಡಬೇಕು ಅಂತಲೇ ತಿಳೀತಿಲ್ಲ.. ಮೇಲೆ ಕೆಳಗೆ ನೋಡೋ ಹಾಗಾಯ್ತು..... ಕುಡೀತಿದ್ದ ನೀರು ನೆತ್ತಿಗೆ ಹತ್ತಿ ಭಯಂಕರ ಕೆಮ್ಮು...
ಓಹ್... ಶಾರೂ... ಏನಾಯ್ತು... ಸಾವಧಾನ... ಯಾಕಿಷ್ಟು.. ಗೊಂದಲಮಯವಾಗಿ ಕಾಣತಾಇದ್ದೀರಿ.. ಕೂಲ್...
ಓಹ್ ಹಾರ್ಲಿಕ್ಸ್ ಕೂಡ ಹಾಗೇ ಇದೆ.. ಇನ್ನೂ ಕುಡಿದಿಲ್ವಾ. .. ತಣ್ಣಗಾಯ್ತು... ಹಲೋ ವೈಟರ್... ಇನ್ನೊಂದು ಬಿಸಿ ಬಿಸಿ ಕಾಫಿ, ಹಾರ್ಲಿಕ್ಸ್ ತೊಗೊಂಡು ಬನ್ನಿ ಅಂತ ಆರ್ಡರ್ ಮಾಡಿ... ನನ್ನ ಬಗ್ಗೆ ಏನೂ ಕೇಳಲ್ವಾ ಶರ್ವಾಣಿ.. ನನ್ನೆಡೆಗೆ ಪ್ರಶ್ನಾರ್ಥಕ ನೋಟ ಎಸೆದ.. ಗಲಿಬಿಲಿಯಿಂದ ತಲೆಯೆತ್ತಿ ಅವನೆಡೆ ನೋಡ್ದೆ....
ಹಿಂಸೆ ಆಗ್ತಾಯಿದೆಯಾ ಶಾರೂ... ಮುಳ್ಳಿನ ಮೇಲೆ ಇದ್ದಂತೆ ಆಗ್ತಿದೆಯಾ... ನನ್ನನ್ನು ನೋಡಿ ಏನೂ ಅನ್ನಿಸಲಿಲ್ವಾ.... ಅವನ ದೈನ್ಯತೆಯ ಮಾತಿಗೆ ಕರುಳು ಚುರುಕ್ ಅನ್ನದಿರಲಿಲ್ಲ... ಹಾಗಲ್ಲ .... ತಲೆ ನೋಯ್ತಾಇದೆ... ಹಾಗೇ.. ನಾಳೆ ಹಬ್ಬ ಅಲ್ವಾ... ಕೆಲಸದ ಒತ್ತಡ.... ಅದಕ್ಕೇ..... ಅಂತ ತಡವರಿಸಿದೆ.
ಹುಂ.... ಹೋಗ್ಲಿ ಬಿಡಿ...... ನೀವ್ಯಾಕೆ ಕೇಳ್ತೀರಿ.... ನಾ ಏನಾದ್ರೆ ನಿಮಗೇನೂ.. ಹೇಗಿದ್ರೆ ನಿಮಗೇನೂ... ಅಲ್ವಾ.... ದೊಡ್ಡದಾದ ನಿಟ್ಟುಸಿರು.... ಇಪ್ಪತ್ತು ವರ್ಷಗಳಿಂದ ನಿಮ್ಮನ್ನ ಹುಡುಕ್ತಾಇದ್ದೀನಿ ಶಾರೂ... ಇದೆಲ್ಲಾ ನೀವು ಓಡಾಡ್ತಿದ್ದ ಜಾಗಗಳಲ್ವಾ. .. ಹಾಗಾಗಿ ಇಲ್ಲಿ ಯಾವತ್ತಾದ್ರೂ ಕಾಣ್ತೀರೇನೋ ಅಂತ ಬೀದಿ ಬೀದಿ ಎಲ್ಲಾ ಹದ್ದಿನ ಕಣ್ಣಿಂದ ನೋಡ್ತಾಇದ್ದೆ... ಇಂದು ನನ್ನ ಕಣ್ಣಿಗೆ ಬಿದ್ದಿರಿ... ಎಷ್ಟು ಸಂತೋಷ ಆಗ್ತಾಯಿದೆ ಗೊತ್ತಾ ..... ಹೇಗಿದ್ದೀರಿ...
ಹುಂ.. ಚನ್ನಾಗಿದ್ದೀನಿ...ಚುಟುಕಾದ ಉತ್ತರ... ನೀವು ಹೇಗಿದ್ದೀರಾ ವರುಣ್ ಅಂತ ಮನಸ್ಸಲ್ಲೇ ಕೇಳ್ಕೊಂಡೆ.. ಬಾಯಿಂದ ಮಾತು ಬರಲಿಲ್ಲ.... ತಲೆ ಎತ್ತಿ ಅವನೆಡೆ ನೋಡ್ದೆ.... ಅವನ.ಕಣ್ಣಿಂದ ನೀರು ಹರೀತಿತ್ತು... ಹೇ.. ಏನಾಯ್ತು
ಏನಿಲ್ಲ.. ಹೀಗೇ ಅಂತ ಕರ್ಚೀಫ್ ತೆಗೆದು ಕಣ್ಣೊರೆಸಿಕೊಂಡ..
ನೀವಾದ್ರೂ ಚನ್ನಾಗಿದ್ದೀರಲ್ಲ.ಅಂತ ಒಂದು ದೀರ್ಘ ನಿಟ್ಟುಸಿರೆಳೆದ... ಅವನ ಮುಖ ನೋಡೋಕ್ಕಾಗ್ತಿಲ್ಲ.. ಹೇಗಿದ್ದವನು ಹೇಗಾಗಿದ್ದಾನೆ... ಆ ಸೆಳೆಯುವ ಕಣ್ಣು ಯಾಕೋ ಕಳೆಗುಂದಿವೆ.. ಮುಖದ ಮೇಲೆ.ನೆರಿಗೆಗಳು.. ವಯಸ್ಸಾದಂತೆ ತೋರಿಸ್ತಿದೆ.. ಅಲೆ ಅಲೆ ತಲೆಕೂದಲು ಎಣ್ಣೆ ಕಂಡು ಎಷ್ಟುದಿನವಾಯ್ತೋ... ದೇಹ ದಷ್ಟಪುಷ್ಟ ಅನ್ನಿಸಿದರೂ... ಮುಖದಲ್ಲಿ ಲವಲವಿಕೆಯಿಲ್ಲ ಅನ್ನಿಸ್ತು... ಯಾಕೆ ಹಾಗೆ ನೋಡ್ತಿದ್ದೀರಾ ಶಾರೂ... ನಾನು ಮೊದಲಿನಂತೆ ಇಲ್ಲ ಅಲ್ವಾ... ಏನು ವ್ಯತ್ಯಾಸ ಕಂಡಿದ್ದು ನನ್ನ ಮುಖದಲ್ಲಿ ಅಂದಾಗ ಎಚ್ಚೆತ್ತವಳಂತೆ ತಲೆತಗ್ಗಿಸಿ ಹಾರ್ಲಿಕ್ಸ್ ಕಪ್ ತುಟಿಗಿಟ್ಟ.ೆ
ಈಗ... ನಾನು... ನನ್ನ ಶಾರ್ವರಿ ..ಇಬ್ಬರೇ..
ಅಂತ ಮತ್ತೆ ಗದ್ಗದಿತನಾದ .. ಅಮ್ಮ..ವಿಜಯಕ್ಕ, ಸುನಂದಕ್ಕ, ಕಿರಣ್... ದೀಪಾ... ಎಲ್ಲಿ ಅಂತ ನಾಲಿಗೆಗೆ ಬಂದ ಮಾತು ಅಲ್ಲೇ ಉಳಿತು.. ಕಣ್ಣಲ್ಲಿ ನೀರು ಧಾರಾಕಾರ... ಸುತ್ತಲೂ ನೋಡ್ದೆ....ತುಂಬಿದ್ದ ಹೋಟೆಲ್... ಯಾರು ಏನಂಡ್ಕೊಳ್ತಾರೋ ಅನ್ನೋ ಭಯ... ವರುಣ್... Control yourself... ಎಲ್ಲಾ ನಿಮ್ಮನ್ನೇ ನೋಡ್ತಾಇದ್ದಾರೆ ಅಂದ.ೆ ಕಣ್ಣೊರೆಸಿಕೊಂಡು ದೀರ್ಘ ನಿಟ್ಟುಸಿರು ಬಿಟ್ಟು ಮುಖದಲ್ಲಿ ಗೆಲುವು ತಂದ್ಕೊಂಡ... ಅಬ್ಭಾ...!! ಈಗಲಾದ್ರೂ "ವರುಣ್ " ಆಂದ್ರಲ್ಲ.. ಸಾಕು.. ಈ ಜನ್ಮಕ್ಕೆ.... ಇನ್ನೂ ಏನೇನೋ ಬಡಬಡಿಸ್ತಿದ್ದ... ನನ್ನ ಮನದಲ್ಲಿ ..". ನಾನು.. ನನ್ನ ಶಾರ್ವರಿ ಇಬ್ಬರೇ.." ಈ ಪದವೇ ಮಾರ್ದನಿಸುತ್ತಿತ್ತು...
ಶಾರ್ವರಿ.. ಶಾರ್ವರಿ...!!!
ಈ ಹೆಸರು ಹೇಗಿದೆ ಶರ್ವಾಣಿ... ಓಕೆ ನಾ... ನನ್ನ ಮೆಡಿಕಲ್ ಸ್ಟೋರ್ ಗೆ ಈ ಹೆಸರು ಸೂಕ್ತಾ ನಾ.. ನೀ ಓಕೆ ಅಂದ್ರೆ ಈ ಹೆಸರು ಫಿಕ್ಸ್... " ಶಾರ್ವರಿ ಮೆಡಿಕಲ್ಸ್.." ಚನ್ನಾಗಿದೆ ಅಲ್ವಾ.... ಅಂತ ಅವತ್ತು ಕೆಳ್ದಾಗ ಯಾಕಿದು ಓಲ್ಡ್ ನೇಮ್... ಬೇರೇನಾದ್ರೂ ಇಡಬಾರದಾ ಅಂದಿದ್ದೆ.. ಯಾಕೆ ಇದು ಚನ್ನಾಗಿಲ್ವಾ ... ನಾನೂ ಬೇಡ ಅಂದೆ ಶಾರೂ.. ಕೇಳ್ತಾನೆ ಇಲ್ಲ ವರುಣ್.. ನಿನಗಿಸ್ಟ ಆಗುತ್ತೆ ಅಂತ ಹೇಳ್ತಾನೆ.. ನಿನಗೂ ಇಷ್ಟ ಆಗ್ಲಿಲ್ಲ ಅಲ್ವಾ .. ಅಂತ ವರುಣ್ ಅಮ್ಮ ಶಾರದಮ್ಮ ನವರು ಅಂದಾಗ, ನಿಮ್ಮಿಷ್ಟ.. ಅವರಿಷ್ಠ ಯಾವ್ದಾದ್ರೂ ಇಟ್ಕೊಳ್ಳಿ
ಅಂತ ನೀರಸವಾಗಿ ನುಡಿದಿದ್ದೆ... ನಮ್ಮಿಷ್ಟನೇ ಆಗಿದಿದ್ರೆ ಇಲ್ಲಿವರೆಗೂ ಬಂದು ನಿನ್ನ ಕೇಳಬೇಕಿತ್ತ ಅಂತ ಹುಸಿಮ್ಯುನಿಸಿನಿಂದ ನನ್ನ ಕಿವಿ ಹಿಂಡಿ ಪ್ರೀತಿಯಿಂದ ಗದರಿದ್ದರು ಶಾರದಮ್ಮ.. ಹಾಗಲ್ಲಮ್ಮ... ನೋಡಿ ನಿಮಗೂ ಇಷ್ಟ ಆಗ್ಲಿಲ್ಲ ಅಲ್ವಾ ಅದಕ್ಕೆ ಹೇಳಿದ್ದು.... ಅವರಿಷ್ಠ ಅಂತ ಅಂದೆ..
ಹುಂ.. ನೋಡು ಅವನ ಮೆಡಿಕಲ್ಸ್ಗೆ ನನ್ನ ಹೆಸರಿರಬೇಕಂತೆ... ಅದಕ್ಕೇ ಶಾ ಯಿಂದ ಹೆಸರು ಬೇಕಂತೆ, ನಾನು ನತದೃಷ್ಟೆ.. ನನ್ನ ಹೆಸರ್ಯಾಕೆ ಬೇಕು ಅಲ್ವಾ... ಬೆಳೆಯುವ ಕುಡಿಗಳು..ನೀವು.. ನಿಮ್ಮ ಕಾರ್ಯಕ್ಷೇತ್ರ ಚನ್ನಾಗಿರ್ಬೇಕು... ಇಬ್ಬರೂ ಓಂದು ತೀರ್ಮಾನಕ್ಕೆ ಬನ್ನಿ ಅಂತ ನಮ್ಮಿಬ್ಬರನ್ನೇ ಅಲ್ಲಿ ಬಿಟ್ಟು ನಮ್ಮಮ್ಮನ ಜೊತೆ ಹರಟೆಹೊಡೆಯಲು ಅಡುಗೆ ಮನೆಗೆ ಹೋದ್ರು..
ಹುಂ... ಹೇಳು ಶಾರೂ... ಚನ್ನಾಗಿದೆ ಅಲ್ವಾ ಶಾರ್ವರಿ... ಅಂದಾಗ... ಸಂಪಿಗೆ ಮೆಡಿಕಲ್ಸ್ ಅಂತ ಇಡಿ... ಹೇಗೂ ಇಬ್ಬರಿಗೂ ಇಷ್ಟ ಅಲ್ವಾ ಸಂಪಿಗೆ.. ಕೇಳೋಕ್ಕೂ.. ಚನ್ನಾಗಿರುತ್ತೆ. ಅಂದಿದ್ದೆ... ಅಷ್ಟೊತ್ತಿಗೆ ಶಾರದಮ್ಮ ಬಂದು... ಶಾರೂ ಸ್ವಲ್ಪ ಕೆಲ್ಸ ಇದೆ ಹೊರಗೆ ಹೋಗೋಣ ಬಾ.. ಅಮ್ಮಂಗೆ ಹೇಳಿದ್ದೀನಿ.. ಬಾರೋ ವರುಣ್ ನಡೆದೇ ಹೋಗೋಣ.. ವಾಕ್ ಆದಂಗೆ ಆಗುತ್ತೆ.. ಅಂದಾಗ ಇಲ್ಲ ಅನ್ನಲಾಗಲಿಲ್ಲ.. ಮೂರೂ ಜನ ಸ್ವಲ್ಪ ದೂರ ಹೋಗೋಷ್ಟರಲ್ಲಿ.. ಅಮ್ಮಾ..ಯಾಕೋ.ನನಗೆ ನಡೆಯೋಕ್ಕೆ ಆಗ್ತಾಯಿಲ್ಲ.. ಕಾಲು ತುಂಬಾ ನೋಯ್ತಾಇದೆ.. ನಾ ಮನೆಗೆ ಹೋಗ್ತೀನಿ.. ನೀವಿಬ್ಬರೇ ಹೋಗ್ಬನ್ನಿ ಅಂತ ವಾಪಸ್ ಹೊರಟೇಬಿಟ್ಟರು ಶಾರದಮ್ಮ.. ಅಮ್ಮಾ ನೀವು ಏನೋ ಕೆಲ್ಸ ಇದೆ ಅಂದದ್ದು.. ನೀವೇ ಬರೊಕ್ಕಾಗಲ್ಲ ಅಂದ್ರೆ.. ನಾ ಹೋಗಿ ಎನ್ಮಾಡ್ಲಿ.. ನನಗೇನು ಕೆಲ್ಸ ಇದೆ ಅಂತ ಅವರ ಜೊತೆಗೆ ಹೊರಟೆ... ಹೇ.. ನನ್ನ ಕೆಲಸ ಆಯ್ತಲ್ಲ.. ಹಾಗಾಗಿ ನಾ ಹೊರಟೆ.. ಅಂತ ನಸುನಕ್ಕೂ ಅಮ್ಮ... ಹೇ ಪೆದ್ದು.. ನೀವಿಬ್ಬರೂ ಆರಾಮಾಗಿ ಹೊರಗೆ ಸುತ್ತಾಡಿ ಮಾತಾಡಿಕೊಂಡು ಬರ್ಲಿ ಅಂತ ನಿಮ್ಮಿಬ್ಬರನ್ನ ಹೊರಡಿಸಿದ್ದು.. ನೀನೂ ಸರಿ.. ಅವನೂ ಸರಿ.. .. ಸರಿಯಾಗಿ ಮನಬಿಚ್ಚಿ ಮಾತಾಡಿದ್ದೀರಾ.. ಇನ್ನೂ ಯಾವ ಕಾಲದಲ್ಲಿದ್ದೀರಾ. ಅಂತ ತಲೆ ಮೇಲೆ ಪ್ರೀತಿಯಿಂದ ಮೊಟುಕಿ ಹೊರಟೇಬಿಟ್ಟರು. ನಾ ಪೆಚ್ಚಾಗಿದ್ದದ್ದನ್ನ ಕಂಡ ವರುಣ್.. ಹೋಗ್ಲಿ ದೂರ ಏನೂ ಬೇಡ.. ಬನ್ನಿ ಅಲ್ಲಿ ಬಂಡಾರಿ ಕ್ಲಿನಿಕ್ ಹತ್ರ ಕೂಡೋಣ. ಸಂಪಿಗೆ ಮರದ ಕೆಳಗೆ... ತಂಪಾಗಿ..ಸೊಂಪಾಗಿ.. ಇಂಪಾಗಿ ಇರುತ್ತೆ.. ಅಲ್ಲಿ ಕೋಗಿಲೆ ಕೂಗ್ತಾಇರುತ್ತೆ.. ನಿಮ್ಮನೆಗೆ ಬಂದಾಗಲೆಲ್ಲಾ ನಾ ಅಲ್ಲಿ ಅರ್ಧ ಗಂಟೆ ಕೂತು ಹೋಗ್ತೀನಿ ಗೊತ್ತಾ.. ಅಂತ ನಡೆದೇಬಿಟ್ಟರು .. ಹಿಂಬಾಲಿಸುವ ಸರದಿ ನನ್ನದು..
ಶಾರ್ವರಿ ಅಂದ್ರೆ ಏನು ಗೊತ್ತಾ.. ಶಾರೂ...
ಶಾರೂ + ವರುಣ್... ಶರ್ವಾಣಿಯಿಂದ ಶಾರೂ.. ವರುಣ್ ನಿಂದ ವರಿ.. ಇವೆರಡೂ ಸೇರಿ ಶಾರ್ವರಿ ಹೇಗಿದೆ ಅಂತ ಕಣ್ಮಿಟುಕಿಸಿ ಅಂದಾಗ ಅಚ್ಚರಿಯಿಂದ ನೋಡಿದ್ದೆ.. ಅಲ್ಲಾ.. ಅಮ್ಮಾ ಏನೋ ಅವರ ಹೆಸರು ಅಂತ ಹೇಳ್ದಂಗಿತ್ತು ... ಹುಂ. .. ಅಮ್ಮನಿಗೆ ಹಾಗೇ ಹೇಳ್ದೆ.. ಇನ್ನೂ ಮದುವೆಯೇ ಇಲ್ಲದೆ ನಿನ್ನ ಹೆಸರು ಜೋಡಿಸಿದ್ರೆ ಏನಾದ್ರೂ ಆಂದೋತಾರೇನೋ ಅಂತ.. ಆದ್ರೆ ಅಮ್ಮನೂ ಹೀಗೇ ಬಿಡಿಸಿ ನಮ್ಮಿಬ್ಬರ ಹೆಸರಿಗೂ ಮ್ಯಾಚ್ ಆಗುತ್ತೆ ಅಂತ ಹೇಳ್ದಾಗ ನನಗೂ ತಬ್ಬಿಬ್ಬು. ಅಂತ ಬಾಗಿ ಕೈಗೆಟುಕುವಂತಿದ್ದ ಕೊಂಬೆಯನ್ನ ಅಲ್ಲಾಡಿಸಿ.. ಉದುರುತ್ತಿದ್ದ ಸಂಪಿಗೆ ದಳಗಳಿಗೆ.. ಮೈಯೊಡ್ಡಿ... ಐ ಆಮ್ ವೆರಿ ಹ್ಯಾಪಿ ಶಾರೂ... .. ಈ ಸಂಪಿಗೆಯ ಸುವಾಸನೆಯಂತೆಯೇ ಇರ್ಬೇಕು ಶಾರೂ ನಮ್ಮಿಬ್ಬರ ಜೀವನ..
ಶಾರೂ.. ಶಾರೂ... ಎಲ್ಲಿ ಕಳೆದುಹೋದ್ರಿ.. ಶಾರೂ... ಹಲೋ ಎಂದಾಗಲೇ.. ವಾಸ್ತವಕ್ಕೆ ಬಂದದ್ದು...
ಹಾಂ.. ಹೇಳಿ... ಏನು...
ಏನೋ ಯೋಚನೆಯಲ್ಲಿದ್ದೀರಾ.. ಯಾಕೆ ಏನಾಯ್ತು.. ಹಾರ್ಲಿಕ್ಸ್ ಅಲ್ಲೇ ಆರೋಯ್ತು.. ಬೇರೆ ತರಿಸಲಾ ಎಂದವನಿಗೆ ಬೇಡ ಅಂತೇಳಿ ಗಟಗಟಾಂತ ಕುಡಿದು ಮುಗಿಸಿದ್ದೆ.....
ಹೋಟೆಲ್ನ ಕಿಟಿಕಿಯಿಂದ ತಣ್ಣನೆ ಗಾಳಿ.... ತುಂತುರು ಹನಿಯನ್ನೂ ಹೊತ್ತು ತಂದದ್ದು ನೋಡಿ... ಓಹ್ ಮಳೆ ಬರ್ತಾಇದೆ.. ಟೈಮ್ ಆಯ್ತು ನಾ ಹೊರಡ್ತೀನಿ... ಎಂದವಳನ್ನ... ಯಾಕೆ ಶರ್ವಾಣಿ ಒಂದೆರಡು ಮಾತೂ ಆಡದೆ ಹೊರಡ್ತೀರಾ.... ನಿಮ್ಮನ್ನ ನೋಡಿ ನಾನೆಷ್ಟು ಖುಷಿಯಾದೆ ಗೊತ್ತಾ.... ಕಳೆದ ವಸ್ತು ಸಿಕ್ಕಂತಾಗಿ ಸಂಭ್ರಮ ಪಟ್ಟಿದ್ದೆ... ನೀವು ನೋಡಿದ್ರೆ... ಹೀಗೆ.. ಅವನ ಕಣ್ಣಲ್ಲಿ ನೀರು ತುಂಬಿತ್ತು. ಹಾಗಲ್ಲ ವರುಣ್... ಮಳೆ ಬೇರೆ ಶುರು ಆಯ್ತು... ನಾಳೆ ಹಬ್ಬ ಬೇರೆ ... ಸಾಕಷ್ಟು ಕೆಲಸಗಳಿವೆ... ಟೈಮ್ ಆಗ್ತಾ ಬಂತಲ್ಲ... ಹಾಗಾಗಿ ಅಷ್ಟೇ.. ತಪ್ಪು ತಿಳಿಬೇಡಿ.. ಅಂತಂದು ಹೊರಡಲಾನುವಾದೆ...
ಹಬ್ಬ... ಹೌದಲ್ಲಾ...
ಹುಂ... ಸರಿ... ಹೊರಡಿ.. ಹೇಗೆ ಬಂದಿದ್ದೀರಿ... ನಾ ಮನೆವರೆಗೂ ಬಿಡಲಾ... ಅಂದಾಗ ಗಾಬರಿಯಿಂದ ಬೇಡ ನಾ ಆಟೋದಲ್ಲಿ ಹೋಗ್ತೀನಿ ಅಂದೆ... ಅಂದ್ರೆ... ಮನೆಗೆ ಕರೆಯೋಲ್ವಾ ಶಾರೂ... ಅಂದಾಗ ಪೆಚ್ಚಾಗುವ ಸರದಿ ನನ್ನದು...
ಮೊಬೈಲ್ ರಿಂಗಾಗಿ...ಯಜಮಾನರ ಕಾಲ್ ಅಟೆಂಡ್ ಮಾಡೋಷ್ಟರಲ್ಲಿ ಆಟೋ ಕರೆದು... ಲಗೇಜ್ನೆಲ್ಲಾ ಆಟೋದಲ್ಲಿಟ್ಟು... ಹುಂ ಹೊರಡಿ... ಇದು ನಿಮ್ಮಿಷ್ಟದ ಸಂಪಿಗೆ ಮಲ್ಲಿಗೆ ದಂಡೇ ನಿಮಗಾಗಿ
.. ನಿಮ್ಮಿಷ್ಟದ ಧಾರವಾಡ ಪೇಡಾ.. ಹಬ್ಬಕ್ಕೆ ಒಂದಷ್ಟು ಹಣ್ಣುಗಳು ... ಬೇಡ ಅನ್ನುವಹಾಗೇ ಇಲ್ಲ.. ತೊಗೊಳ್ಳಿ... ನನ್ನ ಕಾರ್ಡ್.. ನಿಮಗೆ ಫೋನ್ ಮಾಡೋ ಮನಸ್ಸಿದ್ದರೆ ... ಯಾವಾಗಲಾದರೂ ಮಾಡಿ... ಯುಗಾದಿ ಹಬ್ಬದ ಶುಭಾಶಯಗಳು... ಬೆಲ್ಲದ ಸಿಹಿ ನಿಮಗಿರಲಿ... ಬೇವಿನ ಕಹಿಯೆಲ್ಲ ನನಗಿರಲಿ ಅಂತಂದು ಹೊರಟೆ ಬಿಟ್ಟ... ವರುಣ್ .. ವರುಣ್ ...ಸ್ವಲ್ಪ ನಿಲ್ಲಿ.... ನನ್ನ ಕೂಗು... ನನಗೇ ಕೇಳಿಸಲಿಲ್ಲ... ಮನಸ್ಸು ಭಾರವಾಯ್ತು.. ಮೇಡಂ ಎಲ್ಲಿಗೋಗಬೇಕು ಹೇಳಿ ಅಂದ ಆಟೋದವಣಿಗೆ ಅಡ್ರೆಸ್ ಹೇಳಿ ಕುಳಿತೆ.
[20/4/2021, 7:25 pm] Dr. B. N. Shylaja Ramesh: ಆಕೆ ಮೂರನೆಯ ಬಾರಿಗೆ ವೈದ್ಯರ ಬಳಿ ಹೋದಳು.ವೈದ್ಯರು ಆಕೆಯ ಆರೋಗ್ಯದ ವರದಿಯ ಫೈಲ್ ನೋಡಿ....... ಆಕೆಯ ಮುಖವನ್ನೊಮ್ಮೆ ನೋಡಿ....... ಮತ್ತೆ..? ಇದೇನಿದು? ಇನ್ನು ಬೇಡ ಅಂತ ಹೇಳಿದ್ದೇನಲ್ಲ... ಯಾಕೆ ನಿಮಗೆ ಆರೋಗ್ಯದ ಕಾಳಜಿ ಇಲ್ವಾ? ಮಕ್ಕಳಿಗಾಗಿಯಾದರೂ ಬದುಕಬೇಕು ಅನ್ನುವ ಆಸೆ ಇಲ್ವಾ? ಎಂದರು...
ಆಕೆ ಕಣ್ಣ ತುಂಬಾ ನೀರು ತುಂಬಿಕೊಂಡು... ಇನ್ನೇನು.ಮಾಡ್ಲಿ ಡಾಕ್ಟ್ರೇ... ಜೀವನ ಬೇಕು ಅಂದ್ರೆ, ನನ್ನ ತಂದೆ ತಾಯಿ ನೆಮ್ಮದಿಯಾಗಿರ್ಬೇಕು ಅಂದ್ರೆ ನಾ ಒಂದು ಗಂಡು ಮಗುವನ್ನು ಹಡೆಯಲೇ ಬೇಕು... ಇಲ್ಲಾಂದ್ರೆ ಮೂರು ಹೆಣ್ಣುಮಕ್ಕಳೊಂದಿಗೆ ನಾನು ತವರುಮನೆ ಸೇರಬೇಕಾಗುತ್ತೆ... ನನ್ನ ಹಿಂದಿನ ಇನ್ನೂ ಇಬ್ಬರು ತಂಗಿಯರ ಮದುವೆ, ಅವರ ಭವಿಷ್ಯಕ್ಕಾಗಿಯಾದ್ರೂ ನಾನು ಇಲ್ಲೇ ಇರಬೇಕು.... ಇಲ್ಲೇ ಇರಬೇಕು ಅಂದ್ರೆ... ನಾ ಹೆರಲೇ ಬೇಕು ಅಂದಳು.
ರೇಣುಕಾ...ಮಂಜು ದಂಪತಿಗಳಿಗೆ ಮೂರು ಹೆಣ್ಣುಮಕ್ಕಳು ಹುಟ್ಟಿದಾಗ ಅಧೀರಳಾದವಳು ರೇಣುಕಾ... ಪ್ರತಿ ಬಾರಿ ಹೆರಿಗೆಯನಂತರವೂ ಅತೀವ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು... ಕಾರಣ ತನ್ನ ಅತ್ತೆ ಮಾವ ಹಾಗೂ ಗಂಡನ ದೆಸೆಯಿಂದ, ವಂಶೋದ್ಧಾರಕ ಮಗ ಬೇಕೇ ಬೇಕೆಂಬ ಹಠದಿಂದ ರೇಣುಕಾ ಮೂರು ಹೆಣ್ಣು ಮಕ್ಕಳನ್ನ ಹಡೆಯಬೇಕಾಯ್ತು... ಮೊದಲ ಮಗು ಹೆಣ್ಣಾದಾಗ, ಅಸಮಾಧಾನ ವಿದ್ದರೂ ಎರಡನೆಯದು ಗಂಡಾಗಬಹುದು ಎಂಬ ನಿರೀಕ್ಷೆಯಲ್ಲಿ ಅಷ್ಟಾಗಿ ಕಿರುಕಳ ಇರಲಿಲ್ಲ... ಆದರೆ ಮಗುವನ್ನು ಅನಾದರ ಮಾಡುತ್ತಿದ್ದ ಮನೆಯವರ ಬಗ್ಗೆ ಬೇಸರವಿವಿಧದ್ದರೂ ತೋರಿಸಿಕೊಳ್ಳುತ್ತಿರಲಿಲ್ಲ..... ತನ್ನ ತಂದೆ ತಾಯಿಗೂ ಹೆಣ್ಣು ಸಂತಾನವೇ ... ಮೂರು ಹೆಣ್ಣುಗಳಲ್ಲಿ ಮೊದಲನೆಯ ಮಗಳಾದ ರೇಣುಕಾ ... ಬುದ್ಧಿವಂತೆ, ಬಡತನವಿದ್ದರೂ, ಉತ್ತಮ ವಿದ್ಯೆ ಕೊಡಿಸಿದ್ದ ಅನಂತರಾಯರ ಮುದ್ದು ಮಗಳಾಗಿ, ಸಂಸಾರದ ಭಾರವನ್ನು ಹೊತ್ತು ತಂದೆಗೆ ಆಸರೆಯಾಗಿ ನಿಂತಿದ್ದಳು, ಇವಳ ಹಿಂದೆ ಇಬ್ಬರು ಹೆಣ್ಣು ಮಕ್ಕಳಿದ್ದ ಕಾರಣ ಆದಷ್ಟು ಬೇಗ ತಮ್ಮ ಜಾವಾಬ್ದಾರಿಯನ್ನ ಕಳೆದು ಕೊಳ್ಳಬೇಕೆಂದು ರೇಣುಕಾಗೆ ಬೇಗನೆ ಮದುವೆ ಮಾಡಿ ಗಂಡನ.ಮನೆಗೆ ಕಳುಹಿಸಿದ್ದರು. ಅತೀ ಆಸೆ ಬುರುಕರಾದ ರೇಣುಕಾ ಗಂಡನ ಮನೆಯವರ .ಆಸೆ ತಣಿಸಲು ತನ್ನ ಉಳಿದೆರಡು ಹೆಣ್ಣುಮಕ್ಕಳ .ಮದುವೆಗಾಗಿ ಇಟ್ಟಿದ್ದ ಹಣವನ್ನೆಲ್ಲಾ ವರದಕ್ಷಿಣೆ ಯಾಗಿ ಕೊಟ್ಟರೂ ಮತ್ತೂ ಹಣಕ್ಕಾಗಿ ಪೀಡಿಸುತ್ತಿದ್ದ ಬೀಗರನ್ನು ತಣಿಸಲಾರದೆ ಕಂಗೆಟ್ಟಿದ್ದರು ಅನಂತರಾಯರು, ಸಾಲದ್ದಕ್ಕೆ ರೇಣುಕಾ ಮೂರೂ ಹೆಣ್ಣುಮಕ್ಕಳನ್ನು ಹಡೆದ ಮೇಲಂತೂ ರೇಣುಕಾಗೆ ಚಿತ್ರಹಿಂಸೆ ಶುರುವಾಗಿದ್ದಿತು. ಗಂಡುಮಗುವನ್ನು ಹೆತ್ತುಕೊಟ್ಟರೆ ನಿನಗೆ ಅತ್ತೆ ಮನೆಯಲ್ಲಿ ಸ್ಥಾನ ಇಲ್ಲದಿದ್ದರೆ .. ತವರು ಮನೆಗೆ ಮತ್ತೆ ವಾಪಾಸಾಗಬೇಕಾದೀತು... ಮತ್ತೆ ಮಗನಿಗೆ ಬೇರೆ ಮದುವೆ ಮಾಡ್ತೀವಿ ಅಂತ.ದಿನಾ ಚುಚ್ಚುಮಾತಿನಲ್ಲೇ ಚುಚ್ಚುತ್ತಿದ್ದ ಅತ್ತೆಯ ಮಾತಿಗೆ ರೋಸಿ ಹೋಗಿದ್ದಳು ರೇಣುಕಾ.... ಮತ್ತೆ ಗರ್ಭಿಣಿಯಾದಾಗ .ಅವಳತ್ತ ನೋಡಿ... ಈಗಲಾದ್ರೂ ಗಂಡು ಹಡೆಯಬೇಕು ಹೆಣ್ಣನ್ನ ಹಡೆದೆಯೋ... ನಿನಗಿದೆ ಮಾರಿಹಬ್ಬ ... ನೀನು ನಿನ್ನ ಮಕ್ಕಳ ಸಮೇತ.ನಿನ್ನ ತವರಲ್ಲೇ ಇರಬೇಕಾಗುತ್ತೆ ಅಂತ.ಪದೇ ಪದೇ ಹೇಳುತ್ತಿದ್ದರು.
ಮೂರು ಹೆಣ್ಣು ಮಕ್ಕಳಾದ ಮೇಲೆ ಮತ್ತೆ ಗರ್ಭಿಣಿಯಾದಾಗ , ಗಂಡ ಮಂಜು ಲಿಂಗ ತಪಾಸಣೆ ಮಾಡಿಸಿದ್ದ, ಕಾನೂನಿನಲ್ಲಿ ಲಿಂಗ ತಪಾಸಣೆ ಅಕ್ಷಮ್ಯ ಅಪರಾಧವಾಗಿದ್ದರೂ , ರೇಣುಕಾಳ ರೋಧನ ನೋಡಿದ ಡಾಕ್ಟರ್ ಅಂಜಲಿ ಮತ್ತೆ ಗರ್ಭದಲ್ಲಿರುವ.ಮಗು ಹೆಣ್ಣೆಂದು ಹೇಳಲೇ ಬೇಕಾಯ್ತು... ಕುಸಿದುಹೋದ ರೇಣುಕಾ ಅಬಾರ್ಷನ್ ಗಾಗಿ ಪೀಡಿಸಿದ್ದಳು ಡಾ : ಅಂಜಲಿಯನ್ನು. ಅವಳ ಗಂಡನ ಮನೆಯ ಅನಾದರ, ರೇಣುಕಾಳಿಗೆ ಆಗುತ್ತಿದ್ದ ಹಿಂಸೆ ಎಲ್ಲವನ್ನೂ ಹತ್ತಿರದಿಂದ ಸುಮಾರು ವರ್ಷಗಳಿಂದ ನೋಡುತ್ತಿದ್ದ ಡಾ. ಅಂಜಲಿ ಅಬಾರ್ಷನ್ ಮಾಡಿದ್ದರು.
ಮತ್ತೆ ಗರ್ಭಿಣಿಯಾಗಿ ತಪಾಸಣೆಗೆ ಬಂದಾಗ ತುಂಬಾ ಕ್ಷೀಣಿಸಿದ್ದ ರೇಣುಕಾಳನ್ನ, ಚೆಕ್ ಮಾಡಿದ ಡಾ. ಅಂಜಲಿ ಅವಳ ಗಂಡನಿಗೆ ಛೀಮಾರಿ ಹಾಕಿದ್ದರು. ಅದಕ್ಕೆ ಬಗ್ಗದ ಆಸಾಮಿ.... ಗಂಡು ಮಗುವನ್ನು ಹಡೆದರಷ್ಟೇ ... ಇವಳಿಗೆ ಮನೆಯಲ್ಲಿ, ಮನದಲ್ಲಿ ಸ್ಥಾನ... ಇನ್ನೊಮ್ಮೆ ಪರೀಕ್ಷಿಸಿಬಿಡಿ.... ಹೊಟ್ಟೆಯಲ್ಲಿರುವ ಮಗು ಹೆಣ್ಣೋ... ಗಂಡೋ ಎಂದು....ಹೀಗೆ ಧಿಮಾಕಿನಲ್ಲಿಯೇ ನುಡಿದಿದ್ದ.... ಲಿಂಗ ತಪಾಸಣೆ ಕಾನೂನು ಬಾಹಿರ, ಅಲ್ಲದೆ ಅಬಾರ್ಷನ್ ಮಾಡುವ ಹಾಗಿಲ್ಲ... ಹಾಗೇನಾದ್ರೂ ಆದರೆ ನಾನು ಜೈಲಿಗೆ ಹೋಗಬೇಕಾಗುತ್ತೆ ಎಂದು ವಾಪಸ್ ಕಳುಹಿಸಿದ್ದರು ಡಾಕ್ಟರ್.
ಏನಾದರಾಗಲಿ, ಈ ಬಾರಿ ಹಡೆಯಬೇಕು.... ಹೆಣ್ಣಾದರೂ ಸರಿ , ಗಂಡಾದರೂ.ಸರಿ, ನನ್ನದೇ ಕರುಳ ಕುಡಿಯನ್ನು ಚಿವುಟಿಹಾಕುವುದು ಎಷ್ಟರಮಟ್ಟಿಗೆ ಸರಿ... ಎಂದು ಸಮಾಧಾನ ಮಾಡಿಕೊಂಡರೂ.... ಮತ್ತೆ ಹೆಣ್ಣಾದರೆ ಏನು ಮಾಡುವುದು... ಮೂರರ ಜೊತೆಗೆ ಮತ್ತೊಂದು..! ಅಲ್ಲದೆ ನನಗೆ ಈ ಮನೆಯಲ್ಲಿ ಬಾಳು0ಟೆ..? ನಾಲ್ಕು ಮಕ್ಕಳನ್ನ ಕಟ್ಟಿಕೊಂಡು ನಾನು ಏನು ಮಾಡಲಿ? ಅವುಗಳ ವಿದ್ಯಾಭ್ಯಾಸ, ಮದುವೆ..!! ನನ್ನೊಬ್ಬಳ ಕೈಯ್ಯಲ್ಲಿ ಸಾಧ್ಯವೇ?..... ಇನ್ನೊಮ್ಮೆ ಡಾಕ್ಟರ್ ರ ಕೈಕಾಲು ಹಿಡಿದಾದರೂ ಸರಿ... ಮಗು ಯಾವುದೆಂದು ತಿಳಿಬೇಕು, ಒಂದು ವೇಳೆ ಹೆಣ್ಣಾದರೆ ....... ಮತ್ತೆ,ನನ್ನ ಕರುಳನ್ನ ಕತ್ತರಿಸಬೇಕು.... ಏನು ಮಾಡಲಿ... ಎಂದು ಹೊಯ್ದಾಟಕ್ಕೆ ಬಿದ್ದ ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡ್ಕೊಂಡು... ಮತ್ತೆ ಅಂಜಲಿ ಡಾಕ್ಟರ್ ನ ಕಾಲು ಹಿಡಿದು ಗೋಗರೆಯುತ್ತಾಳೆ... ಇವಳ ಕಣ್ಣೀರಿಗೆ ಕರಗಿದ ಡಾಕ್ಟರ್ ಟೆಸ್ಟ್ ಮಾಡಿದಾಗ ಮತ್ತೆ.... ಹೆಣ್ಣು ಭ್ರೂಣ ವಿದೆಯೆಂದು ತಿಳಿಯುತ್ತೆ.... ಭೂಮಿಗೇ ಇಳಿದು ಹೋಗುತ್ತಾಳೆ ರೇಣುಕಾ.... ಕಣ್ಣು ಕತ್ತಲೆ ಬ0ದಂತಾಗಿ ಅಲ್ಲಿಯೇ ಕುಸಿಯುತ್ತಾಳೆ... ಮೂರು ತಿಂಗಳ ಗರ್ಭಿಣಿ, ಸರಿಯಾದ ಆರೈಕೆಯಿಲ್ಲದೆ, ಅತೀ ಒತ್ತಡದಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ಜರ್ಜರಿತಳಾದ ರೇಣುಕಾಳನ್ನ ನೋಡಿದ ಡಾಕ್ಟರ್ ಗೇ ಅತೀವ ನೋವಾಗುತ್ತದೆ. ರೇಣುಕಾಳ ಪರಿಸ್ಥಿತಿಯ ಅರಿವಿದ್ದ ಡಾಕ್ಟರ್ ಅಂಜಲಿ, ಅವಳನ್ನು ಸಮಾಧಾನಿಸಿ, ರಕ್ತಹೀನತೆಯಿಂದ ಬಳಲುತ್ತಿದ್ದ ಅವಳನ್ನು ಅಡ್ಮಿಟ್ ಮಾಡಿಕೊಂಡು ರೇಣುಕಾಳ ಗಂಡನಿಗೆ ಫೋನ್ಮಾಡಿ ತಿಳಿಸುತ್ತಾರೆ. ಡಾಕ್ಟರ್ ಅವಳ ಹೊಟ್ಟೆಯಲ್ಲಿರುವ ಮಗು ಯಾವ್ದು, ಹೆಣ್ಣೋ ಗಂಡೋ... ಒಂದುವೇಳೆ ಗಂಡಾಗಿದ್ದರೆ ಅವಳ ಜವಾಬ್ದಾರಿ ನಂದು,.ಹೆಣ್ಣಾಗಿದ್ದರೆ.. ಅವಳ್ಯಾರೋ ನನಗೆ ಗೊತ್ತಿಲ್ಲ ... ಅಂದ ಅವನ ಅಮಾನುಷ ನಡೆಗೆ ಬೇಸತ್ತ ಡಾಕ್ಟರ್ಗೆ ಏನು ಮಾಡಲೂ ತಿಳಿಯದಾಯ್ತು... ಇವರ ಸಂಭಾಷಣೆ ಕೇಳಿಸಿಕೊಂಡ ರೇಣುಕಾ ಅಧೀರಲಾಗುತ್ತಾಳೆ. ಡಾಕ್ಟರ್, ಮತ್ತೆ ಹೆಣ್ಣು ಮಗು ಅಂದ್ರೆ, ನನಗೆ ಬದುಕೇ ಇಲ್ಲ... ದಯವಿಟ್ಟು ಅಬಾರ್ಷನ್ ಮಾಡಿಬಿಡಿ, ಎಂದು ಗೋಗರೆಯುತ್ತಾಳೆ. ದೇಹದಲ್ಲಿ ತ್ರಾಣವೇ ಇಲ್ಲದ ಅವಳಿಗೆ ಅಬಾರ್ಷನ್ ಮಾಡುವುದಾದರೂ ಹೇಗೆ.? ಅಲ್ಲದೆ ಒಬ್ಬ ತಾಯಿಯಾಗಿ, ಇನ್ನೂ ಪ್ರಪಂಚವನ್ನೇ ಕಾಣದ ಮಗುವನ್ನು ಕೊಲ್ಲುವುದಾದರೂ ಹೇಗೆ..? ಉಳಿಸುವುದಷ್ಟೇ ನನ್ನ ಧರ್ಮ.. ಕೊಲ್ಲುವುದಲ್ಲ... ಏನಾದರಾಗಲಿ ಈ ಮಗುವನ್ನು ಉಳಿಸಿಕೊಳ್ಳಲೇ ಬೇಕು. ಒಂದು ವೇಳೆ ಅವರಿಗೆ ಬೇಡದಿದ್ದರೆ ನಾನೇ ಮಗುವನ್ನು ದತ್ತು ತೆಗೆದುಕೊಂಡರಾಯ್ತು ಅನ್ನುವ ನಿರ್ಧಾರಕ್ಕೆ ಬಂದ ಡಾಕ್ಟರ್ ಅಂಜಲಿ, ರೇಣುಕಾಳಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ, ಅವಳ ಗಂಡ ಮಂಜುವಿಗೆ ಫೋನ್ ಮಾಡಿ ಗರ್ಭದಲ್ಲಿ ಗಂಡು ಮಗುವಿದೆ, ಅದು ಆರೋಗ್ಯವಾಗಿ ಬೇಕೆಂದರೆ ರೇಣುಕಾಳಿಗೆ ಆರೈಕೆ ಬೇಕು, ನಿಶ್ಶಕ್ತಿಯಿಂದ ಬಳಲುತ್ತಿರುವ ಅವಳಿಗೆ ದೈಹಿಕವಾಗಿ, ಮಾನಸಿಕವಾಗಿ ಆರೈಕೆಬೇಕು ಎಂದು ಹೇಳಿದಾಕ್ಷಣ.... " ಗಂಡು ಮಗು" ಎಂಬುದನ್ನು ಕೇಳಿಯೇ ಆಕಾಶಕ್ಕೇರಿದ ಮಂಜು, ಖಂಡಿತ ಡಾಕ್ಟರ್.. ಅವರು ಆರೋಗ್ಯವಾಗಿರಬೇಕು... ಈಗಲೇ ಬಂದೆ ಎಂದು ಆಸ್ಪತ್ರೆಗೆ ಓಡೋಡಿ ಬರುತ್ತಾನೆ.
[24/5/2021, 7:43 pm] Dr. B. N. Shylaja Ramesh: ಸಣ್ಣ ಕಥೆ
*ಭರವಸೆಯ ಬೆಳಕು*
ಕಿಟಕಿಯಿಂದಾಚೆ ನೋಡುತ್ತಾ ಕುಳಿತ ಮಾಧುರಿಗೆ ಆ ತಂಪಿನ ಪರಿಸರವೂ ಸುಡುವ ಧಗೆಯಂತೆ ಅನ್ನಿಸುತ್ತಿತ್ತು. ಹಾಗೆಯೇ ಉರಿದು ಹೋದ ತನ್ನ ಬಾಳನ್ನು ನೆನೆನೆನೆದು ಕಣ್ಣಿಂದ ತಂತಾನೇ ಕಣ್ಣೀರು ಕೆನ್ನೆಗಿಳಿಯುತ್ತಿತ್ತು. ಏನೆಲ್ಲಾ ಆಗಿಹೋಯ್ತು ಈ ಆರು ತಿಂಗಳಲ್ಲಿ...! ಅಕಸ್ಮಾತ್ತಾಗಿ ಸಿಕ್ಕ ಜಯ್... ಜಯಂತ್ ಬಾಳಿಗೆ ಬೆಳಕಾಗಿ ಬಂದದ್ದೂ ಒಂದು ಆಕಸ್ಮಿಕವೇ... ಅಂದು ಆಫೀಸ್ಗೆ ಗಡಿಬಿಡಿಯಲ್ಲಿ ರಸ್ತೆ ದಾಟಿ ಹೋಗುತ್ತಿದ್ದಾಗ ಅಚಾನಕ್ ಆಗಿ ಬಂದ ಅವನ ಗಾಡಿ ಗುದ್ದಿ ಇಬ್ಬರೂ ನೆಲಕ್ಕುರುಳಿದರೂ ಹೆಚ್ವೇನೂ ಅನಾಹುತವಾಗಿರಲಿಲ್ಲ... ಅಲ್ಲಲ್ಲಿ ತರಚಿ ಸಣ್ಣಪುಟ್ಟ ಗಾಯಗಳಾಗಿತ್ತು. ಕ್ಷಮಿಸಿ, ಕ್ಷಮಿಸಿ ಎಂದು ಬೇಡುತ್ತಲೇ ಆಸ್ಪತ್ರೆಗೆಳೆದೊಯ್ದು ಚಿಕಿತ್ಸೆಕೊಡಿಸಿದ್ದ. ಆಕಸ್ಮಿಕವಾಗಿ ಆದ ಅನಾಹುತಕ್ಕೆ ಅವನನ್ನು ಬ್ಲೇಮ್ ಮಾಡಲೂ ಆಗದು, ನಾನೇ ಆತುರಾತುರವಾಗಿ ಸುತ್ತಮುತ್ತ ನೋಡದೇ ರೋಡಿಗೆ ನುಗ್ಗಿದ್ದೆ.. ಪಾಪ ಸುತ್ತಲ ಜನ ಅವನದ್ದೇ ತಪ್ಪು ಅಂತ ಹಿಡಿದು ಬಡಿದದ್ದೂ ಆಯ್ತು... ಸುಮ್ಮನೆ ಒದೆ ತಿನ್ನುತ್ತಿದ್ದ ಅವನನ್ನು ನೋಡಲಾಗದೆ ನಾನೇ ಎಲ್ಲರನ್ನೂ ದೂರತಳ್ಳಿದ್ದೇ. ಬಿದ್ದ ಏಟಿಗಿಂತ ಹೊಡೆತ ತಿಂದ ಏಟು ಜಾಸ್ತಿ ಇತ್ತು ಅವನಿಗೆ. ಚಿಕಿತ್ಸೆಪಡೆದು ನಾನು ಮನೆಗೆ ಬಂದೆನಾದರೂ... ತನ್ನ ತಪ್ಪಿಲ್ಲದಿದ್ದರೂ... ಎಲ್ಲರ ಹೊಡೆತ ಬೈಗುಳ ತಿಂದು ಬಿದ್ದ ಪೆಟ್ಟನ್ನೂ ಸಹಿಸಿ, ನನ್ನ ಚಿಕಿತ್ಸೆಯೇಡೆಗೆ ಹೆಚ್ಚು ಆಸ್ಥೆ ವಹಿಸಿದ್ದ ಅವನ ಮುಖವೇ ಎದುರು ಬಂದಂತಾಯ್ತು. ಮಲಗಲೂ ಆಗದೆ ಮತ್ತೆ ಓದಿದೆ ಆಸ್ಪತ್ರೆಗೆ.. ಮೈಕೈಗೆಲ್ಲ ಬ್ಯಾನ್ಡೇಜ್ ಹಾಕಿಸಿಕೊಂಡು ನಡೆಯಲೂ ಆಗದೆ, ಗಾಡಿಯನ್ನು ತಳ್ಳಲೂ ಆಗದೆ ಒದ್ದಾಡುತ್ತಿದ್ದ ಅವನನನ್ನು ಆಸ್ಪತ್ರೆ ಬಾಗಿಲಲ್ಲಿ ನೋಡಿದೆ, ಅಯ್ಯೋ ಅನಿಸಿತ್ತು. ನೇರ ಅವನ ಬಳಿ ಹೋಗಿ.. ಕ್ಷಮಿಸಿ ನನ್ನ ದೆಸೆಯಿಂದಲೇ ಹೀಗಾಯ್ತು.. ನಾನೂ ಸುತ್ತಮುತ್ತ ನೋಡಿ ಬರಬೇಕಿತ್ತು. ಇವತ್ತು ಆಫೀಸ್ನಲ್ಲಿ ಹೆಚ್ಚು ಕೆಲಸ ಇತ್ತು..ಜೊತೆಗೆ ಲೇಟ್ ಬೇರೆ ಆಗಿತ್ತು ಅಂತ ಆತುರಾತುರವಾಗಿ ಬಂದೆ... ಹೀಗಾಯ್ತು ನೋಡಿ... ಈ ಅವತಾರದಲ್ಲಿ ಆಫೀಸಿಗೂ ಹೋಗಲಾರದೆ ರಜೆ ಹಾಕಬೇಕಾಯ್ತು ಎಂದೇ.. ನಾನು ಇಂದು ಆಫೀಸ್ನಲ್ಲಿ ಡ್ಯೂಟಿ ರಿಪೋರ್ಟ್ ಮಾಡ್ಕೋಬೇಕಿತ್ತು ಮೇಡಂ... ಹೀಗಾಯ್ತು... ಈ ಅವತಾರದಲ್ಲಿ ನಾನು ಹೇಗೆ ಹೋಗಲಿ ಅಂತಲೇ ಯೋಚ್ನೆ ಮಾಡ್ತಾ ಇದ್ದೀನಿ... ಆದ್ರೆ ಹೋಗಲೇಬೇಕು... ನೀವ್ಯಾಕೆ ಮತ್ತೆ ಬಂದ್ರಿ ಅಂದ... ಇಲ್ಲೇ ಹತ್ತಿರದಲ್ಲೇ ನಮ್ಮ ಮನೆ.. ನಿಮಗೆ ನಾನು ಸಾರಿಯೂ ಹೇಳಲಿಲ್ಲ..ಥ್ಯಾಂಕ್ಸ್ ಕೂಡಾ ಹೇಳಲಿಲ್ಲ.. ನನ್ನಿಂದ ನಿಮಗೆ ಇಷ್ಟು ಕಷ್ಟನಷ್ಟ.. ಕ್ಷಮಿಸಿ ಎಂದು ಹೇಳಲು ಬಂದೆ.. ಕ್ಷಮಿಸಿ ಎಂದು ಹೇಳಿ ಹೊರಟಿದ್ದೆ.
ಬೆಳಿಗ್ಗೆ ಆಫೀಸ್ಗೆ ಹೋದಾಗ .. ಎಲ್ಲರೂ ನನ್ನ ಬ್ಯಾನ್ಡೇಜ್ ಬಗ್ಗೆ ಕೇಳುವವರೇ.. ಅಂಥದ್ದೇನಾಗಿಲ್ಲ ಸಣ್ಣ ಆಕ್ಸಿಡೆಂಟ್ ಅಷ್ಟೇ ಎಂದೇಳಿ ನನ್ನ ಕ್ಯಾಬಿನನ್ನಲಿ ಕುಳಿತೆ... ರೇಷ್ಮಾ ಬಳಿ ಬಂದವಳೇ ಮಧು.. ನಿನ್ನೆ ಹೊಸ ಚೀಫ್ ಬಂದಿದ್ದಾರೆ... ಎಲ್ಲ ಡಿಪಾರ್ಟ್ಮೆಂಟ್ ಚೆಕ್ ಮಾಡಿದ್ರು .. ಹೊಸ ಪ್ರಾಜೆಕ್ಟ್ ವಿಚಾರ ಕೇಳಿದ್ರು ಫೈಲ್ ನಿನ್ನಲ್ಲಿ ಇತ್ತಲ್ಲ... ನೀನು ಬಂದಿಲ್ಲ ಅಂದೆ.. ತನ್ನಿ ಚೆಕ್ ಮಾಡ್ತೀನಿ... ನಾಳೆ ಅವ್ರು ಬಂದಮೇಲೆ ಪ್ರೆಸೆಂಟ್ ಮಾಡ್ಲಿ ಅಂದ್ರು.. ಆ ಫೈಲ್ ಕೊಟ್ಟೆ... ಗುಡ್ ಅಂದ್ರು... ಈಗ ನಿನ್ನ ಕರೀತಾ ಇದ್ದಾರೆ... ಹೋಗು ಅಂದ್ಲು... ಸರಿ ಅಂತ ಫೈಲ್ ತೊಗೊಂಡು ಹೊರಟೆ. ಮೇ ಐ ಕಮಿನ್ ಸರ್.... ಎಂದೇ... ಫೈಲ್ ಚೆಕ್ ಮಾಡುತ್ತಿದ್ದವರು ಬನ್ನಿ...ಕುಳಿತುಕೊಳ್ಳಿ... ಎಂದರು ತಲೆ ಎತ್ತದೇ... ಸರ್... ಇದು ಹೊಸ ಪ್ರಾಜೆಕ್ಟ್ ಫೈಲ್... ಎಲ್ಲ ಡೀಟೈಲ್ಸ್ ಇದ್ರಲ್ಲಿದೆ.. ನೋಡಿ ಎಂದು ಅವರ ಮುಂದಿಟ್ಟಾಗ ತಲೆ ಎತ್ತಿದ ಚೀಫ್ನನ್ನು ನೋಡಿದಾಗ ನನಗೆ ಶಾಕ್... ಅವರೇ ನಿನ್ನೆ ಬಿದ್ದು.. ನನ್ನಿಂದಾಗಿ ಹೊಡೆತ ತಿಂದು.. ನನಗಾಗಿ ಮರುಗಿದವರು.. ಆಶ್ಚರ್ಯದ ಜೊತೆಗೆ ಮುಜುಗರವೂ ಆಗಿ ಕ್ಷಮಿಸಿ... ಅಂದೆ.. ಪಾಪ ಏಳಲಾರದೆ ಎದ್ದು... ಪರ್ವಾಗಿಲ್ಲ ಮೇಡಂ... ಇದೊಂದು ಆಕಸ್ಮಿಕವಷ್ಟೇ... ಇಬ್ಬರದ್ದೂ ತಪ್ಪಿಲ್ಲ... ಆದರೆ ತೊಂದರೆ ಅಂತೂ ಆಯ್ತು... ನಾನು..ಜಯ್..ಜಯಂತ್.... ಯುವರ್ ಗುಡ್ ನೇಮ್.ಪ್ಲೀಸ್ ಅಂದಾಗ... ನಾನು..ಮಧು... ಮಾಧುರಿ ಅಂದು ಪರಿಚಯ ಮಾಡಿಕೊಂಡಿದ್ದೆ.... ಪರಿಚಯ, ಸ್ನೇಹ, ಪ್ರೀತಿ ಎಲ್ಲವೂ ಆಗಿ...ಒಂದು ತಿಂಗಳಲ್ಲೇ ಮದುವೆಯೂ ಆಯಿತು... ಇಬ್ಬರಿಗೂ ಹಿಂದೆ ಮುಂದೆ ಯಾರೂ ಇಲ್ಲದ ಕಾರಣ.. ಸ್ನೇಹಿತರು, ಆಫೀಸ್ ಸಿಬ್ಬಂದಿ ಮಧ್ಯೆ ಸರಳವಾಗಿ ವಿವಾಹವಾದೆವು. ಹೊಸದಾಗಿ ಬೆಂಗಳೂರಿಗೆ ಬಂದು ಪಿಜಿ ಯಲ್ಲಿದ್ದ ಜಯ್... ನನ್ನ ಸಣ್ಣ ಮನೆಗೆ ವರ್ಗಾವಣೆಯಾದರು.. ತುಂಬಾ ಸ್ನೇಹಪರ, ಸಜ್ಜನ ವ್ಯಕ್ತಿಯಾದ ಜಯ್ ಜೊತೆ ದಿನಗಳುರುಳಿದ್ದೆ ಗೊತ್ತಾಗಲಿಲ್ಲ... ಸುಂದರ ದಾಂಪತ್ಯಕ್ಕೆ 6 ತಿಂಗಳು ಕಳೆಯುವಾಗ್ಲೇ ಬಂದೆರಗಿತ್ತು ಆಘಾತಕಾರಿ ಸುದ್ದಿ... ಒಂದು ದಿನ ಪ್ರಾಜೆಕ್ಟ್ ವಿಚಾರವಾಗಿ ಫೀಲ್ಡ್ ವರ್ಕ್ಗೆ ಹೊರಗೆ ಹೋಗಿದ್ದ ಜಯ್... ತಲೆ ಸುತ್ತಿ ಬಿದ್ದು ಆಸ್ಪತ್ರೆಗೆ ಸೇರಿದ್ದಾರೆ ಅನ್ನುವ ಸುದ್ಧಿ ಕೇಳಿ ನನಗೆ ಭೂಮಿಯೇ ಬಾಯ್ಬಿಟ್ಟಂತಾಗಿತ್ತು... ! ಆಫೀಸ್ನಿಂದ ನೇರ ಆಸ್ಪತ್ರೆಗೆ ಓಡಿದ್ದೆ.... ಪ್ರಜ್ಞೆಯಿಲ್ಲದೆ ಮಲಗಿದ್ದ ನನ್ನ ಜಯ್ ನನ್ನು ಕಂಡು ಕರುಳು ಕಿವುಚಿದಂತಾಗಿತ್ತು... ಒಂದು ತಲೆಸುತ್ತಿಗೆ ಇಷ್ಟೆಲ್ಲ ಅನಾಹುತವೇ ಎಂದು ಅನಿಸಿತ್ತಾದರೂ... ಮನಸ್ಸು ಏನೋ ನೆನೆದು ನಡುಗಿಹೋಗಿತ್ತು. ನೇರ ಡಾಕ್ಟರ್ ಬಳಿ ಓಡಿದ್ದೆ.. ಏನಾಯ್ತು ಡಾಕ್ಟರ್.. ಎನಿ ಥಿಂಗ್ ಸೀರಿಯಸ್ ಅಂದಾಗ.... ಸ್ಕ್ಯಾನ್ ಎಕ್ಸರೇ ಎಲ್ಲ ಮಾಡಿದ್ದೀವಿ ಮೇಡಂ... ರಿಪೋರ್ಟ್ ಬರಬೇಕು.. ಆ ನಂತರವಷ್ಟೇ ಹೇಳೋಕ್ಕಾಗೋದು.. ಸಧ್ಯಕ್ಕೆ ಮೆಡಿಸಿನ್ ಕೊಟ್ಟಿದ್ದೀನಿ, ಪ್ರಜ್ಞೆ ಬರೋವರೆಗೂ ಕಾಯಬೇಕು ಎಂದಾಗ ಅದೆಷ್ಟು ದೇವರಲ್ಲಿ ಹರಕೆ ಹೊತ್ತೆನೋ ಆ ದೇವರೇ ಬಲ್ಲ , ಇಡೀ ರಾತ್ರಿ ಆಸ್ಪತ್ರೆಯಲ್ಲಿ ನಿದ್ದೆಯಿಲ್ಲದೇ.. ಜಯಂತ್ ಎಚ್ಚರವಾಗುವವರೆಗೂ ಕಾಯ್ದೆ... ಮಧು...ಮಧು ಎಂದು ಕನವರಿಸುತ್ತಿದ್ದ ಜಯ್ ತಲೆನೇವರಿಸುತ್ತಾ ಕಣ್ಣೀರು ಹರಿಸುತ್ತಿದ್ದೆ... ಏನೂ ಆಗೋಲ್ಲ ಮಧು, ಬಿಸಿಲಲ್ಲಿ ಓಡಾಡಿದೆನಲ್ಲ... ಹಾಗಾಗಿ ತಲೆ ಸುತ್ತಿದೆ ಅಷ್ಟೇ.. ಇನ್ನೇನಿಲ್ಲ... ಭಯ ಪಡಬೇಡ ಎಂದಾಗ ನಕ್ಕು ಹಗುರಾಗಿದ್ದೆ...
ಬೈನ್ ಟ್ಯೂಮರ್ ಸಿವಿಯರ್ ಸ್ಟೇಜ್ ನಲ್ಲಿದೆ, ಯಾವಾಗ ಬೇಕಾದರೂ ಅನಾಹುತವಾಗಬಹುದು... ಇದೇ ಮೊದಲನೇ ಬಾರಿಗೆ ತಲೆ ಸುತ್ತಿದ್ದ ಅವರಿಗೆ, ತಲೆ ನೋವು ಬರ್ತಾಇತ್ತ ಹೇಗೆ.... ಡಾಕ್ಟರ್ ಹೇಳಿದಾಗ ಭೂಮಿಗೆ ಕುಸಿದು ಹೋಗಿದ್ದೆ. ಆಗಾಗ ತಲೆನೋವು ಅಂತ ಅನಾಸಿನ್ ಮಾತ್ರೆ ತೊಗೊಳ್ತಾಇದ್ದದ್ದು ಕಣ್ಣೆದುರಿಗೆ ಬಂತು, ಓಹ್... ಇದೇನಿದು ದೇವರೇ... ಸಾಮಾನ್ಯ ತಲೆನೋವು ಇಷ್ಟು ಸೀರಿಯಸ್ ರೋಗಕ್ಕೆ ಕಾರಣ ಆಯ್ತಾ..? ನನ್ನ ಜಯ್ ನ ಉಳಿಸಿಕೊಳ್ಳೋದು ಹೇಗೆ.? ಅಂಗಲಾಚಿದ್ದೇ ಡಾಕ್ಟರ್ ಬಳಿ... ನಮ್ಮ ಕೈಲಾದದ್ದು ಮಾಡ್ತೀವಿ ಉಳಿದದ್ದು ದೈವೇಚ್ಛೆ ಎಂದಾಗ... ಅಸಾಯಕಳಾಗಿ ದೇವರಲ್ಲಿ ಮೊರೆಯಿಟ್ಟೆ..... ಆದರೆ ನನ್ನ ಮೊರೆ ಕೇಳಲೇ ಇಲ್ಲ ಅವನು... ಒಂದು ವಾರ ನರಳಿದ್ದ ಜಯ್.... ಕೊನೆಯುಸಿರೆಳೆದಾಗ ನಾನು ಕುಸಿದುಬಿದ್ದೆ.... ಜೊತೆಯಲ್ಲಿದ್ದ ರೇಶ್ಮಾಗೆ ಪಾಪ ತುಂಬಾ ತೊಂದರೆಯಾಯ್ತು... ಆಪೀಸ್ ಸ್ಟ್ಯಾಫ್ ಸಹಕಾರದೊಂದಿಗೆ ಅಂತ್ಯಕ್ರಿಯೆ ಮುಗಿಸಿ, ಎಲ್ಲ ಕರ್ಮಗಳನ್ನೂ ಮುಗಿಸಿ ಬಂದಾಗ... ಜಯ್ ಇಲ್ಲದ ಅಸಹಾಯಕತೆಗೋ... ಊಟ ತಿಂಡಿ ತಿನ್ನದೆ, ನಿತ್ರಾಣವಾಗಿದ್ದಕ್ಕೋ... ಜೀವನ ಮುಂದೆ ಹೇಗೆ ಅನ್ನುವ ಅನ್ನುವ ಭಯಕ್ಕೋ... ಕುಸಿದುಬಿದ್ದು ಪ್ರಜ್ಞೆಕಳೆದುಕೊಂಡಾಗ ಉಪಚರಿಸಿ ಆರೈಕೆ ಮಾಡಿದ್ದೂ ರೇಷ್ಮಾನೆ.
ತನ್ನ ಮಡಿಲಿನಲ್ಲಿ ಮಲಗಿಸಿ ಕೊಂಡು ಮಧು.... ನೀನಿನ್ನು ಅಳಬಾರ್ದು... ಅತ್ತರೆ ಜಯ್ ಬರ್ತಾರಾ...? ಅವರಿಗೂ ನಿನ್ನನ್ನು ಬಿಟ್ಟಿರಲಾಗೊಲ್ಲ ಕಣೇ.. ಅದಕ್ಕೇ ನಿನ್ನ ಮಡಿಲು ತುಂಬೋಕ್ಕೆ ಮಗುವಾಗಿ ಬರ್ತಾಇದ್ದಾರೆ, ಅವರನ್ನ ನಗುತ್ತಾ ಸ್ವಾಗತಿಸಬೇಕಲ್ವಾ.? ನೀ ಹೀಗೆ ಇದ್ದರೆ ಹೇಗೆ ಹೇಳು.. ಮಧು ಅಂದಾಗ... ಆ ಅಸಹನೀಯ ದುಃಖದಲ್ಲೂ ಒಂದು ಆಶಾಕಿರಣ ಮೂಡಿದಂತಾಯ್ತು. ಮೃಧುವಾಗಿ ಹೊಟ್ಟೆ ನೇವರಿಸಿಕೊಂಡೇ... ನನ್ನ ಜಯ್ ನನ್ನೇ ನೇವರಿದಂತಾಗಿ ರೋಮಾಂಚನವಾಯ್ತು. ಕಮರಿಹೋದ ಬದುಕಿಗೊಂದು ಭರವಸೆಯ ಬೆಳಕು ಮೂಡಿತ್ತು.
ಡಾ: B.N ಶೈಲಜಾ ರಮೇಶ್
Comments
Post a Comment