214ಅಮೃತ ಭುವಿಯಲ್ಲಿ ದುಡಿವ ನೇಗಿಲಯೋಗಿ
ಅಮೃತ ಭುವಿಯಲ್ಲಿ ದುಡಿವ ನೇಗಿಲಯೋಗಿ
************************************
ಮಳೆ ಬಿಸಿಲೆನ್ನದೆ
ಬರಿದೇ ದುಡಿವ ಕಾಯಕ
ಅತಿವೃಷ್ಟಿ ಅನಾವೃಷ್ಟಿಯಲೂ
ಕಂಗೆಡದೆ ದುಡಿವ
ಭೂತಾಯಿಯ ಸೇವಕ
ಮೊಣಕಾಲುದ್ದ ಕೆಸರು
ಮೈಯಲ್ಲಿ ಇಳಿವ ಬೆವರು
ಕಷ್ಟನಷ್ಟಗಳನ್ನೂ ಲೆಕ್ಕಿಸದೆ
ಬಾಧಿಸುವ ಹಸಿವನೂ ಮರೆತು
ದುಡಿವ ರೈತ ದೇವರು
ರೈತ ದೇಶದ ಬೆನ್ನೆಲುಬು
ದುಡಿತದ ಭರದಿ ಬರೀ ಎಲುಬು
ದುಡಿದ ಫಸಲು ಕೈಗೆಟುಕೆ
ಹರುಷ ತುಂಬಿ ಬಾಳಿನಲ್ಲಿ
ಹೊಟ್ಟೆತುಂಬ ತಿಂದಂದೇ ಹಬ್ಬ
ಶ್ರಮದ ಹಿಂದೆ ಹಲವು ಭಾವ
ಸಹಿಸಿ ದಹಿಸಿ ನಿತ್ಯ ನೋವ
ಮಡದಿ ಮಕ್ಕಳ ಜೊತೆ
ಜಗದ ಹಸಿವು ತಣಿಸುವುದಕೆ
ದುಡಿದು ಹೈರಾಣಾದ ಜೀವ
ರಾಸಾಯನಿಕ - ಸಾವಯವ
ವೈಜ್ಞಾನಿಕ - ಸಾಂಪ್ರದಾಯಿಕ
ಯಾವ ಮಾದರಿಯಲೂ ದುಡಿತ
ಕೈಕೇಸರಾದರಷ್ಟೇ ಬಾಯ್ಗೆ ಮೊಸರು
ಅನ್ನ ಬೆಳೆಯಲು ಸುರುಸುವ ನೆತ್ತರು
ವೃಷ್ಟಿಯೋ ಅನಾವೃಷ್ಟಿಯೋ
ಬದಲಿಸನೆಂದೂ ಕಾಯಕ
ಕೃಷಿಯೊಂದಿಗಿದೆ ಅದೇ ಸಂತೃಪ್ತಿ
ಭೂತಾಯಿಯೊಡನಾಟದ ಸುಖ
ಅನ್ನದಾತ ನಿನ್ನ ಬದುಕು ಸಾರ್ಥಕ
ಈ ಅಮೃತದ ಭುವಿಯಲ್ಲಿ
ದುಡಿವ ನೇಗಿಲ ಯೋಗಿ
ಅಮೃತವೀಯಲೀ ಭುವಿಯು
ಕಳೆದೆಲ್ಲರ ಸಂಕಷ್ಟ ನಿತ್ಯ ಹರಿಯಲಿ
ಸಂಕ್ರಾಂತಿಯ ಸುಗ್ಗಿ ಸಂಭ್ರಮವು
ಶೈಲೂ.......
Comments
Post a Comment