199 ಊರ್ಮಿಳಾ
********************
ಹೇ.. ರಾಮಾ...
ನೀನೇಕೆ ನನಗಿತ್ತೆ
ಇಂತಹ ಶಿಕ್ಷೆ..
ಕಾರಣವೇನು ಹೇಳು
ನೋವಲ್ಲೇ
ದಿನದೂಡುವುದಕೆ....!!
ಸೀತೆಯಾ ವಿರಹದ
ನೋವು
ನೀ ತಾಳಲಾರದಾಗ..
ನೆನೆಪಾಗಲಿಲ್ಲವೇ
ನಿನಗೆ
ನನ್ನ ಲಕ್ಷ್ಮಣನ ವಿಯೋಗ....!!
ಶಬರಿಯಾ ಕಾತರದ
ಕಾಯುವಿಕೆಯಾ ಪರಿ
ನೀ ಕಂಡಾಗ..
ಅರಿವಾಗಲಿಲ್ಲವೇ ನಿನಗೆ
ಲಕ್ಷ್ಮಣನಿಗಾಗಿ ನಾ ಹಾಡಿದಾ
ವಿರಹದಾ ರಾಗ....!!
ಹದಿನಾಲ್ಕು ವರ್ಷ
ನೀ ಪಟ್ಟ ಕಷ್ಟಕ್ಕಿಂತ
ಅಧಿಕ..
ನಾನನುಭವಿಸಿದಾ
ಮನದಾಳದಾ
ನೋವು....!!
ತಂದೆಯಾಣತಿಯಂತೆ
ನಡೆದು ನೀ
ಪುರುಷೋತ್ತಮ ನೆನಿಸಿದೆ..
ಲಕ್ಷ್ಮಣನಾಣತಿಯಾ
ಅನುಕರಿಸಿ ನಾ
ಗೃಹಸ್ಥ ಧರ್ಮ ಪಾಲಿಸಿದೆ....!!
ಅಡವಿ ರಕ್ಕಸರ ಕೊಂದು
ರಾಜಧರ್ಮ ಪಾಲಿಸಿದ
ನೀನು ಮಹಾನ್ ವ್ಯಕ್ತಿ..
ಅಯೋಧ್ಯೆಯಾ ಹಿರಿಯರಾ ಕ್ಷೇಮ
ಧರ್ಮ, ರಕ್ಷಣೆಗೈದ
ನಾ ತೆರೆಮರೆಯ ಪಂಕ್ತಿ....!!
ಒಂದೆರಡು ವರ್ಷ
ಸೀತೆಯಾ ವಿರಹ
ನೀ ಸಹಿಸದಾದೆ..
ಧೀರ್ಘ ಕಾಲದಾ ವಿರಹಿ
ಊರ್ಮಿಳೆಯ ಭಾವುಕ ಮನಸ
ನೀನರಿಯದಾದೆ....!!
ಧರ್ಮರಕ್ಷಕನೆಂದು
ಪುರುಷೋತ್ತಮನೆಂದು
ನಿನಗೆ ಮಾನ ಸಮ್ಮಾನ..
ಸರಿಪಡಿಸಿ
ನೀಡು ಎನಗೆ
ಸುಂದರ ಜೀವನ ಯಾನ....!!
ನೋವಲ್ಲೇ ಬೆಳೆದು ನೋವನ್ನೇ
ನುಂಗಿ, ನೋವಲ್ಲೇ
ಕಳೆಯುತ್ತಿರುವೆ ಸಮಯ..
ಸೀತೆಯಂತೆ
ಅಗ್ನಿಪ್ರವೇಶಿಸಿ
ನಾ ಕೇಳಬೇಕೇನು ನ್ಯಾಯ..???
ಶೈಲೂ.....
Comments
Post a Comment