180 ಶ್ರೀ ರಾಮ ಕಥನ

ಶ್ರೀ ರಾಮ ಕಥನ
**************

ಇದು ಶ್ರೀರಾಮನ ಪುಣ್ಯ ಕಥನ
ನೆನೆದರೆ ಜೀವನ ಪಾವನ
ಪುರುಷೋತ್ತಮನ ಆದರ್ಶ ಚರಿತೆಯ
ನೆನೆಯಲು ಬಾಳದು ಧನ್ಯ||

ಹುಟ್ಟಿನಿಂದಲೇ ರಾವಣ ತಾನು
ಸೊಕ್ಕಿ ಮೆರೆದು ಜಗವನು ಕಾಡಲು
ತಕ್ಕ ಶಿಕ್ಷೆ ಯ ಮಾಡಲೊಸುಗ
ರಘುಪತಿ ತಾನವತರಿಸಿದನಮ್ಮ .||

ಮಕ್ಕಳಿಲ್ಲದ ದಶರಥ ತಾನು
ಪುತ್ರಕಾಮೇಷ್ಠಿ ಯಾಗವ ಮಾಡಲು
ಮೆಚ್ಚಿ ಆವಿರ್ಭವಿಸಿದ ಅಗ್ನಿ ದೇವ 
ಪಾಯಸವ  ತಾ ನಿತ್ತನಮ್ಮ ||

ಯಜ್ಞಪುರುಷನ ತೃಪ್ತಿಯ ಹರಕೆಗೆ
ಚಂದಿರನಂಥ ಅಂದದ ಮೊಗದ
ಮುದ್ದಿನ ಮಕ್ಕಳು ನಾಲ್ವರು
ದಶರಥನ ಸತಿಯರಿಗೆ ಜನಿಸಿದರಮ್ಮ.||

ರಾಘವ ಉತ್ತಮನಾಗಿ ಬೆಳೆದು
ಹೋಗಿ ಮುನಿಗಳ ಯಾಗವ ರಕ್ಷಿಸಿ
ಹರಿಸಿ ತಾ ಅಹಲ್ಯೆಯ ಶಾಪವಾ
ದುಷ್ಟ ರಕ್ಕಸರ ಮಣಿಸಿದನಮ್ಮ. ||

ಜನಕರಾಜನ ಕುವರಿ ಸೀತೆಯ
ಸ್ವಯಂವರದೆ ಜಯಿಸಲೋಸುಗ
ಶಿವಧನುವನು ಮುರಿದು ಸೀತೆಯ ಗೆದ್ದು
ಸಕಲರ  ಸಮ್ಮುಖದಿ ವರಿಸಿದನಮ್ಮ||

ಪಟ್ಟಾಭಿಷೇಕದ ಸಂಭ್ರಮದಲಿರಲು
ದುಷ್ಟಕೂಟದ ಕುತಂತ್ರಕೆ ಮಣಿದು
ಪಿತೃವಾಕ್ಯವನು ಪಾಲಿಸಲೆಂದು
ಸತಿ,ಸೋದರನೊಂದಿಗೆ ವನವಾಸಕೆ ತೆರಳಿದನಮ್ಮ ||

ಶಿಷ್ಟ ರಕ್ಷಣೆಯ ಭಾರವನೊತ್ತು
ದುಷ್ಟ ರಕ್ಕಸರ ಹೆಡೆಮುರಿ ಕಟ್ಟಿ
ಕ್ಷಾತ್ರತೇಜಸ್ಸಿನಿಂದೊಳೆಯುವ ಧೀರ
ಋಷಿಮುನಿಗಳ ಸೇವೆಯ ಮಾಡಿದನಮ್ಮ ||

ಮಾಯಾ ಜಿಂಕೆಯ ಮೋಹಕೆ ಬಿದ್ದ
ಮೆಚ್ಚಿನ ಮಡದಿಯ  ಆಸೆಯ ನುಡಿಗೆ
ಮರೀಚಿಕೆ ಮಾಯೆಯ ಬೆನ್ನಟ್ಟಿ
ದುಷ್ಟ ಮಾರೀಚನ ಸಂಹರಿಸಿದನಮ್ಮ ||

ಮುನಿವೇಷದಿ ಬಂದ ರಾವಣ ತಾನು
ಭಿಕ್ಷೆ ಯ ಬೇಡುವ ನೆಪದಲಿ ನಿಂದು
ಸಹಜ ರೂಪವತಿ ಕರುಣೆಯ ಮೂರ್ತಿ
ಮಾತೇ ಜಾನಕಿಯ ಅಪಹರಿಸಿದನಮ್ಮ ||

ಸುಗ್ರೀವ ನ ಸಖ್ಯವ ಬೆಳೆಸಿ
ಭಕ್ತ ಅಂಜನಾತನಯನ ಕಳಿಸಿ
ದುಷ್ಟ ರಾವಣನ ನೆಲೆಯನು ಅರಿತು
ವಿಜಯಯಾತ್ರೆಗೆ ಹೊರಟಿಹನಮ್ಮ ||

ಕಪಿಗಳ ನೆರವಲಿ ಲಂಕಾನಗರಿಗೆ
ಸೇತು ಬಂಧವ ಬೆಸೆದು ಸಾಗರದಾಟಿ
ದಶಕಂಠ ರಾವಣನ ಶಿರಗಳ ಛೇದಿಸಿ
ಲೋಕಮಾತೆಯ ಸೆರೆ ಬಿಡಿಸಿದನಮ್ಮ||

ಮರಳಿ ಅಯೋಧ್ಯೆಗೆ ಪಾದವಬೆಳಿಸಿ
ಧರ್ಮದಿಂದಲಿ ರಾಜ್ಯವನಾಳುತ
ರಾಮರಾಜ್ಯದ ಕನಸು ನನಸಾಗಿಸುತ
ಮರ್ಯಾದಾಪುರುಷೋತ್ತಮ ಎನಿಸಿದನಮ್ಮ. ||

         ಶೈಲೂ......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ